ಹಿರೀಸಾವೆ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2012–13ನೇ ಸಾಲಿನಲ್ಲಿ ರೂ 37,48,255 ಲಕ್ಷ ಲಾಭಗಳಿಸಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ. ಮಧು ಹೇಳಿದರು.
ಸಂಘದ ಆವರಣದಲ್ಲಿ ಭಾನುವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ಕಟ್ಟಡ ನಿಧಿಗಾಗಿ ಪ್ರತಿ ಸದಸ್ಯರಿಂದ ರೂ 100 ಸಂಗ್ರಹಿಸಲಾಗಿದೆ. ಸಂಘದ ಮುಂಭಾಗದಲ್ಲಿ ವ್ಯಾಪಾರ ಮಳಿಗೆಗಳ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸರ್ಕಾರದ ನಿಯಮದಂತೆ ತಿಂಗಳ ಪೂರ್ಣ ಪಡಿತರಗಳನ್ನು ವಿತರಣೆ ಮಾಡುತ್ತಿದ್ದು, ಎಲ್ಲ ರೀತಿಯ ಸಾಲಗಳನ್ನು ರೈತರಿಗೆ ನೀಡಿರುವುದಾಗಿ ಅವರು ತಿಳಿಸಿದರು.
ಸದಸ್ಯ ಎಚ್.ವಿ. ಕೃಷ್ಣೆಗೌಡ ಮಾತನಾಡಿ, ಜಮಾ ಖರ್ಚುವಿನ ವಿವರಗಳನ್ನು ಮುದ್ರಣ ಮಾಡಿಸಿ, ಪ್ರತಿ ಸದಸ್ಯರಿಗೂ ಆಹ್ವಾನ ಪತ್ರಿಕೆಯೊಂದಿಗೆ ನೀಡುವಂತೆ ಹೇಳಿದರು. ಸದಸ್ಯರಾದ ದೀವಾಕರ, ಎಚ್.ಎನ್. ಬಸವಯ್ಯ ಮತ್ತಿತರರು ಮಾತನಾಡಿ, ಏಪ್ರಿಲ್ ತಿಂಗಳಲ್ಲಿ ಸಕ್ಕರೆ ವಿತರಣೆ ಮಾಡದ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು.
ಸಂಘದ ನಾಮ ನಿರ್ದೇಶಕರು ಸಭೆಗೆ ಹಾಜರಾಗದ ಬಗ್ಗೆ ಸರ್ವ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವಂತೆ ಸಭೆಯು ತಿರ್ಮಾನಿಸಿತು. ಸಂಘದ ನಿರ್ದೇಶಕ ದೇವರಾಜು ಮಾತನಾಡಿ, ಎಲ್ಲ ಸದಸ್ಯರು ನೀಡುವ ಸಲಹೆಗಳನ್ನು ಮುಂದಿನ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚೆ ನಡೆಸಿ, ಸಂಘದ ಒಳಿತಿನ ಬಗ್ಗೆ ತಿರ್ಮಾನ ಮಾಡುವುದಾಗಿ ಸಭೆಗೆ ತಿಳಿಸಿದರು.
ಸಂಘದ ಅಧ್ಯಕ್ಷ ಬಿ.ಟಿ. ವಿಜಯಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಗದು ಗುಮಾಸ್ತರಾದ ಮೀನಾಕ್ಷಿ 2012–13ನೇ ಸಾಲಿನ ಜಮಾ ಖರ್ಚುಗಳ ಮಾಹಿತಿಯನ್ನು ಸಭೆಗೆ ನೀಡಿದರು.