ಹಾವೇರಿ: ಬಿಸಿಯೂಟ ತಯಾರಕರಿಗೆ ₹6 ಸಾವಿರ ವೇತನ ನೀಡುವ 6ನೇ ಗ್ಯಾರಂಟಿ ಯೋಜನೆ ಜಾರಿ ಹಾಗೂ ಅಡುಗೆ ಸಿಬ್ಬಂದಿಗೆ ಸಮವಸ್ತ್ರ, ಎಪ್ರಾನ್, ಟೋಪಿ ಮತ್ತು ಕೈಗವಸು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿ ವತಿಯಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಮಂಗಳವಾರ ಅಂತ್ಯಗೊಂಡಿತು.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ನೇತೃತ್ವದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮುಖಂಡತ್ವದ ನಿಯೋಗವು ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಬಿಸಿಯೂಟ ತಯಾರಕರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿತು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಅಧಿಕಾರಿಗಳ ಸಭೆ ನೆಡೆಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗವುದು. ನೀವು ಧರಣಿ ವಾಪಸ್ ಪಡೆದುಕೊಳ್ಳಿ’ ಎಂದು ಹೇಳಿದರು. ಸಿಎಂ ಅವರ ಮೇಲೆ ಭರವಸೆ ಇಟ್ಟು ಅಹೋರಾತ್ರಿ ಧರಣಿಯನ್ನು ಅಂತ್ಯಗೊಳಿಸಿದ್ದೇವೆ ಎಂದು ಸಂಘಟನೆಯ ಮುಖಂಡ ವಿನಾಯಕ ಕುರುಬರ ತಿಳಿಸಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಅವರಿಗೂ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಮುಖಂಡರಾದ ಜಿ. ಅಕ್ಕಮ್ಮಾ, ಲಲಿತಾ ಬೂಶೆಟ್ಟಿ, ರಾಜೇಶ್ವರಿ ದೊಡ್ಡಮನಿ, ಪಾರ್ವತಿ ಆಪಟಿ, ಶಕುಂತಲಾ ಸಜ್ಜನ, ಭಾರತಿ ಕಬನೂರ, ವಿದ್ಯಾ ಸಿದ್ದಪ್ಪನವರ, ಗದಿಗೆಮ್ಮಾ ಕುರುಬರ ಮುಂತಾದವರು ಇದ್ದರು.