ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಸಗೊಬ್ಬರ ಪೂರೈಸಲು ರೈತರ ಒತ್ತಾಯ

Published 25 ಮೇ 2024, 14:12 IST
Last Updated 25 ಮೇ 2024, 14:12 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಹದವಾದ ಮಳೆಯಾಗಿದ್ದು, ರೈತರು ಬಿತ್ತನೆ ಮಾಡುವುದಕ್ಕೆ ಸಕಾಲವಾಗಿದೆ. ಆದರೆ ರಸಗೊಬ್ಬರ ಸಿಗುತ್ತಿಲ್ಲ. ಕೂಡಲೇ ಹೊಸ ಗೊಬ್ಬರ ಪೂರೈಕೆ ಮಾಡಬೇಕು’ ಎಂದು ರೈತ ಜಗದೀಶ್ ಕೆರೋಡಿ ಒತ್ತಾಯಿಸಿದರು.

ಸಮೀಪದ ಹುಲ್ಲತ್ತಿ ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂದೆ ಶನಿವಾರ ರಸಗೊಬ್ಬರ ಪೂರೈಸುವಂತೆ ಪ್ರತಿಭಟನೆ ನಡೆಸಿ, ರೈತರಿಗೆ ಡಿಎಪಿ ಮತ್ತು ಯುರಿಯಾ ಪೂರೈಕೆ ಆಗದೆ ರೈತರು ಗೊಬ್ಬರಕ್ಕಾಗಿ ಪರದಾಡುವಂತಾಗಿದೆ ಎಂದು ಅವರು ದೂರಿದರು.

ಹಾವೇರಿ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಹಳ್ಳಿಗಳಿಂದ ರೈತರು ರಸ ಗೊಬ್ಬರಕ್ಕಾಗಿ ಸೊಸೈಟಿಗಳ ಮುಂದೆ ನಿಂತು ಗೋಗರೆದರೂ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಸಿಗುತ್ತಿಲ್ಲ ಬೇಸರ ವ್ಯಕ್ತಪಡಿಸಿದರು.

ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಹಾವೇರಿ ಜಿಲ್ಲೆಯ ಎಲ್ಲಾ ರೈತ ಬಾಂಧವರಿಗೆ 2024ನೇ ಸಾಲಿನ ಮುಂಗಾರು ಹಂಗಾಮಿಗೆ ಬೀಜ, ರಸಗೊಬ್ಬರಗಳ ದಾಸ್ತಾನು ಸಂಗ್ರಹಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ತಿಳಿಸಿದ್ದರು. ಆದರೆ ಇಲ್ಲಿ ರೈತರು ಬಂದು ಗೊಬ್ಬರಕ್ಕಾಗಿ ಸೊಸೈಟಿ ಮುಂದೆ ಭಿಕ್ಷೆ ಬೇಡುವಂತಾಗಿದೆ. 2003ರಿಂದ ಹಿಂಗಾರು ಮತ್ತು ಮುಂಗಾರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ರೈತರು ಕೃಷಿ ಚಟುವಟಿಕೆಗಳಿಗೆ ಮಾಡಿದ ಸಾಲವು ಹಾಗೆ ಉಳಿದಿದೆ. ಈ ವರ್ಷ ಮುಂಗಾರು ಸ್ವಲ್ಪ ಮಟ್ಟಿಗೆ ಚುರುಕುಗೊಂಡಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ರೈತರು ಕೇವಲ ರಸಗೊಬ್ಬರಕ್ಕಾಗಿ ಅಲೆದಾಡುವಂತಾಗಬಾರದು. ಸರಿಯಾದ ಸಮಯಕ್ಕೆ ರಸಗೊಬ್ಬರ ಪೂರೈಸದಿದ್ದರೆ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ನಂದೆಪ್ಪ ಗುಗ್ಗರಿ, ಮಾರುತಿ ದೊಡ್ಡಮನಿ, ಕಾಂತೇಶ್ ಗುಗ್ಗರಿ, ಕಲ್ಲಪ್ಪ ಗುತ್ತಲ, ಸೋಮಣ್ಣ ಬೇವಿನಹಳ್ಳಿ, ಮಂಜಪ್ಪ ಗುಗ್ಗರಿ, ಲೋಕಣ್ಣ ಎಲಿಗಾರ, ಮಲ್ಲೇಶ್ ಗುಗ್ಗರಿ, ತಿಮ್ಮಪ್ಪ ನಾಯಕ, ಕಿರಣ್ ಲಮಾಣಿ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT