ಹಾನಗಲ್: ಕಾಯ್ದೆ, ಕಾನೂನು ರಚಿಸುವ ಗುರುತರ ಜವಾಬ್ದಾರಿ ನಿರ್ವಹಿಸುವ ಜನಪ್ರತಿನಿಧಿಗೆ ಕಾನೂನು ಜ್ಞಾನ ಅತ್ಯಗತ್ಯ ಎಂದು ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ವಕೀಲರ ಸಂಘಕ್ಕೆ ಶನಿವಾರ ಭೇಟಿ ನೀಡಿ, ವಕೀಲರಲ್ಲಿ ಮತಯಾಚಿಸಿದ ಅವರು, ರಾಜ್ಯ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿಭಾಯಿಸಿದ ಸಂದರ್ಭದಲ್ಲಿ ದೇಶದ ಹೆಸರಾಂತ ವಕೀಲರು, ಕಾನೂನು ಪಂಡಿತರ ಸಂಪರ್ಕ ಸಾಧ್ಯವಾಗಿದೆ. ಇದರಿಂದ ಕಾನೂನಿನ ಪರಿಜ್ಞಾನವೂ ಲಭ್ಯವಾಗಿದೆ ಎಂದರು.
ಚುನಾವಣೆ ಸಮಯದಲ್ಲಿ ಮಾತ್ರ ನಮ್ಮದು ರಾಜಕಾರಣ. ಮಿಕ್ಕ ಅವಧಿಯಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. ಚುನಾವಣೆ ಬಳಿಕವೂ ಎದುರಾಳಿಯನ್ನು ಗುರಿಯಾಗಿಸಿಕೊಂಡು ರಾಜಕಾರಣ ಮಾಡಿದರೆ, ಅದರಿಂದ ಜನರಿಗೆ ತೊಂದರೆಯಾಗುತ್ತದೆ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕೇಂದ್ರದ ನಮ್ಮ ಸರ್ಕಾರ ಬ್ರಿಟಿಷ್ ವಸಾಹತು ನೆರಳಿನ ಸಾಕಷ್ಟು ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಕಾಯ್ದೆ, ಕಾನೂನುಗಳ ರಚನೆಯಲ್ಲಿ ಅನುಭವಿ ರಾಜಕಾರಣಿ ಬಸವರಾಜ ಬೊಮ್ಮಾಯಿ ಸಂಸದರಾಗಿ ನೆರವಾಗಲಿದ್ದಾರೆ. ದೇಶದ ಬದಲಾವಣೆ ಗಮನಿಸಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಮನೋಹರ ತಹಸೀಲ್ದಾರ್, ಮಾಜಿ ಶಾಸಕ ಶಿವರಾಜ ಸಜ್ಜನರ, ವಕೀರ ಸಂಘದ ಅಧ್ಯಕ್ಷ ಟಿ.ಬಿ.ಸವಣೂರ, ಉಪಾಧ್ಯಕ್ಷ ಖಂಡು ಬೋಸ್ಲೆ, ಕಾರ್ಯದರ್ಶಿ ಎಂ.ಎಸ್.ಕಾಳಂಗಿ, ಮುಖಂಡರಾದ ಸಂದೀಪ ಪಾಟೀಲ, ಮಾಲತೇಶ ಸೊಪ್ಪಿನ, ಬಿ.ಎಸ್.ಅಕ್ಕಿವಳ್ಳಿ, ಸೋಮಶೇಖರ ಕೊತಂಬರಿ ಇದ್ದರು.