ರಾಣೆಬೆನ್ನೂರು: ‘ಶಿಕ್ಷಣವನ್ನು ಪರೀಕ್ಷೆಗಷ್ಟೆ ಸೀಮಿತಗೊಳಿಸಿ, ಅಂಕಗಳಿಕೆ ಬಗ್ಗೆ ತೋರಿದಷ್ಟು ಆಸಕ್ತಿಯನ್ನು ನಿಜ ಜೀವನದ ಸಾಧನೆಗೆ ಬಳಸಿಕೊಳ್ಳುವಲ್ಲಿ ಅಷ್ಟಾಗಿ ಗಮನ ಕೊಡುತ್ತಿಲ್ಲ. ಅದಕ್ಕಾಗಿ ನಮ್ಮ ವಿದ್ಯಾರ್ಥಿಗಳು ಶಿಕ್ಷಣವನ್ನು ಜ್ಞಾನವನ್ನಾಗಿ, ಜ್ಞಾನವನ್ನು ಕೌಲಶವನ್ನಾಗಿ ಪರಿವರ್ತಿಸಿಕೊಳ್ಳಬೇಕು’ ಎಂದು ಹರಿಹರ ಎಸ್ಜೆವಿಪಿ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಹೇಳಿದರು.
ಇಲ್ಲಿನ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ ಸೆಕ್ಯೂರ- 24 ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೂನಾದ ಮಿಲ್ಟ್ರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಸಿ.ಎಚ್. ವಿನಯಕುಮಾರ ಮಾತನಾಡಿ, ‘ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಂಡು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಬರೀ ಪದವಿ ಪಡೆಯುವುದು ಮುಖ್ಯವಲ್ಲ. ಪದವಿ ಜೊತೆಗೆ ಸೃಜನಶೀಲತೆ, ಉದ್ಯಮಶೀಲತೆ ಮೈಗೂಡಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಾಚಾರ್ಯ ಶಿವಕುಮಾರ ಬಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೆಕ್ಯೂರ -24 ಚೇರ್ಮನ್ ಬಿ.ಮಹೇಶ್ವರಪ್ಪ , ದೈಹಿಕ ಶಿಕ್ಷಣ ನಿರ್ದೇಶಕದ ಪ್ರವೀಣ ಚೂರಿ, ಸಜೀದ್ ಖಾಝಿ, ಪ್ರತೀಕ್ಷಾ ಕೋರಿ, ಸುಪ್ರಿಯಾ ಪಾಟೀಲ, ರಕ್ಷತಾ ಗಡಾದ, ಪ್ರಜ್ವಲ್ ಕೋರಿ ಉಪಸ್ಥಿತರಿದ್ದರು.