ರಾಣೆಬೆನ್ನೂರು: ಸತತ ಅಧ್ಯಯನದಿಂದ ಗುರುಗಳ ಮಾರ್ಗದರ್ಶನ ಪಡೆದು ಮುನ್ನಡೆದರೆ ಸಾಧನೆಯ ಶಿಖರ ಏರಬಹುದು ಎಂದು ಆರ್ಟಿಇಎಸ್ ಮಹಾವಿದ್ಯಾಲಯದ ಅಧ್ಯಕ್ಷ ಸುಭಾಷ ಸಾವುಕಾರ ಹೇಳಿದರು.
ನಗರದ ಆರ್ಟಿಇಎಸ್ ಮಹಾವಿದ್ಯಾಲಯದಲ್ಲಿ ಬುಧವಾರ ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಗುರಿಯೆಡೆಗೆ ಗಮನವಿಟ್ಟು ಪರಿಶ್ರಮ ಪಟ್ಟರೆ ಯಶಸ್ಸು ಗಳಿಸಲು ಸಾಧ್ಯ. ಪಾಲಕರಾದವರು ತಮ್ಮ ಮಕ್ಕಳ ಆಸಕ್ತಿ, ಅಭಿರುಚಿಗೆ ಪ್ರೋತ್ಸಾಸಿದರೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ಪ್ರೇರಣೆಯಾಗುವುದು ಎಂದರು.
2024 ರ ಸಾಲಿನ ವೈದ್ಯಕೀಯ ಕೋರ್ಸ್ಗಳಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವೈದ್ಯಕೀಯ ಕೋರ್ಸ್ಗಳಿಗೆ ಆಯ್ಕೆಯಾದ ಆರ್ಟಿಇಎಸ್ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ರಕ್ಷಿತಾ ನಾಡಿಗೇರ (620/700), ಉಮ್ಮೆಸಲ್ಮಾ ಎಂ.ಡಿ (523/ 700), ಶಾಂತಾ ಮುದ್ದಪ್ಪಳವರ (525/ 700)ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.