ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ-ರಾಣೆಬೆನ್ನೂರ ರೈಲ್ವೆ ಯೋಜನೆ ಅವೈಜ್ಞಾನಿಕ: ಬಸನಗೌಡ ಗಂಟೆಪ್ಪಗೌಡ್ರ

Published 23 ಜನವರಿ 2024, 16:14 IST
Last Updated 23 ಜನವರಿ 2024, 16:14 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಶಿವಮೊಗ್ಗ-ರಾಣೆಬೆನ್ನೂರ ರೈಲ್ವೆ ಯೋಜನೆ ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿದೆ. ರೈಲ್ವೆ ಯೋಜನೆಗೆ ನಮ್ಮ ಅಭ್ಯಂತರವಿಲ್ಲ ಆದರೆ ಮಾರ್ಗ ಬದಲಾವಣೆ ಅವಶ್ಯ ಎಂದು ಹೋರಾಟ ಸಮಿತಿಯ ಮುಖಂಡರಾದ ಬಸನಗೌಡ ಗಂಟೆಪ್ಪಗೌಡ್ರ ತಿಳಿಸಿದರು.

ಅವರು ರಟ್ಟೀಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈಲ್ವೆ ಯೋಜನೆಯ ಮಾರ್ಗ ಬದಲಾವಣೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಈಗಾಗಲೇ ರಟ್ಟೀಹಳ್ಳಿ ಭಾಗದ ರೈತ ಸಮುದಾಯ ತುಂಗಾ ಮೇಲ್ದಂಡೆ ಯೋಜನೆ, ರಸ್ತೆ ವಿಸ್ತರಣೆ, ನೀರಾವರಿ ಯೋಜನೆಗಳಿಗೆ ಭೂಮಿಯನ್ನು ಕಳೆದುಕೊಂಡಿದ್ದಾರೆ. ಸಮರ್ಪಕ ಪರಿಹಾರ ಬಾರದೆ ತೊಂದರೆಯಲ್ಲಿರುವ ಈ ಸಂದರ್ಭದಲ್ಲಿ ರೈಲ್ವೆ ಯೋಜನೆಯಿಂದಾಗಿ ಇನ್ನಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಪಟ್ಟಣಕ್ಕೆ ಹೊಂದಿಕೊಂಡು ರೈಲ್ವೆ ಮಾರ್ಗ ನಿರ್ಮಿಸಲು ಉದ್ದೇಶಿಸಿದ್ದು, ಪಟ್ಟಣ ತಾಲ್ಲೂಕು ಕೇಂದ್ರವಾಗಿ ಬೆಳೆಯುತ್ತಿದೆ. ಕಾರಣ ಪಟ್ಟಣದಿಂದ ಸಾಕಷ್ಟು ಹೊರವಲಯದಲ್ಲಿ ರೈಲ್ವೆ ಮಾರ್ಗಗಳನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು.

ಇದರಿಂದ ವಸತಿ ನಿವೇಶನಕ್ಕೂ ಅನುಕೂಲವಾಗಲಿದೆ. ಹಿಂದೆ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ಯಾವುದೇ ಮನೆ, ಮತ್ತು ವಸತಿಗೆ ಯೋಗ್ಯವಾದ ಭೂಮಿಗೆ ಹಾನಿಮಾಡದಂತೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಆದೇಶಿಸಿದ್ದಾರೆ. ಅದರಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಈಗಾಗಲೇ ಈ ಕುರಿತು ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಶಂಕರಗೌಡ ಚನ್ನಗೌಡ್ರ. ಉಜಿನೆಪ್ಪ ಕೋಡಿಹಳ್ಳಿ. ಪ್ರಭು ಮುದಿವೀರಣ್ಣನವರ, ರವಿ ಹದಡಿ, ಸುಭಾಷ ಹದಡೇರ, ರಾಜು ಮಳಗೊಂಡರ, ಗಣೇಶ ಸಾಳುಂಕೆ, ನಾಗರಾಜ ಜಾಧವ, ನಾಗನಗೌಡ ಪಾಟೀಲ, ಉಜೆಪ್ಪ ದ್ಯಾವಕ್ಕಳವರ, ದೇವರಾಜ ಸೂರ್ಯವಂಶಿ, ಷಣ್ಮುಖ ಪ್ಯಾಟೀಗೌಡ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT