ತುಮ್ಮಿನಕಟ್ಟಿ: ಶಿವಕುಮಾರ ಶ್ರೀಗಳು ಕಾಯಕದ ಮೂಲಕ ಕೈಲಾಸ ಕಂಡ ಅಪರೂಪದ ಶಕ್ತಿ. ತ್ರಿವಿಧ ದಾಸೋಹದ ಮೂಲಕ ಮಕ್ಕಳಿಗೆ ಅನ್ನ, ಅಕ್ಷರ, ಅರಿವು ಮೂಡಿಸಿ ಸಾವಿರಾರು ಬಡಮಕ್ಕಳ ಉಜ್ವಲ ಭವಿಷ್ಯ ಬೆಳಗಿದರು ಎಂದು ಕೂಡಲದ ಗುರು ನಂಜೇಶ್ವರ ಮಠದ ಮಹೇಶ್ವರ ಶಿವಾಚಾರ್ಯರು ಹೇಳಿದರು.
ಇಲ್ಲಿನ ಸಂತೆಪೇಟೆಯಲ್ಲಿ ಭಾನುವಾರ ಸ್ಥಳೀಯ ಶಿವಕುಮಾರ ಶ್ರೀಗಳ ಸೇವಾ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಲಿಂ. ಶಿವಕುಮಾರ ಶ್ರೀಗಳ 5ನೇ ವರ್ಷದ ಪುಣ್ಯ ಸಂಸ್ಮರಣೋತ್ಸವದ ಅಂಗವಾಗಿ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪಾಲಕರು ಗುರುತಿಸಿ, ಪ್ರೋತ್ಸಾಹಿಸುವುದು ಬಹಳ ಮುಖ್ಯ. ಮಕ್ಕಳ ಆಶಯದಂತೆ ಅವರ ಕಲಿಕೆಗೆ ಮುಕ್ತ ಅವಕಾಶ ಕಲ್ಪಿಸಬೇಕು. ಅವರಲ್ಲಿನ ವಿಶೇಷ ಕೌಶಲವನ್ನು ಹೊರ ಹಾಕಲು ಸಂಪೂರ್ಣ ಸಹಕಾರ ನೀಡಬೇಕು. ಇಷ್ಟವಾದದ್ದನ್ನು ಕಷ್ಟ ಪಡದೆ ಕಲಿಯುವುದರಿಂದ ಅವರ ಗುರಿ, ಸಾಧನೆ ಸುಲಭವಾಗುತ್ತದೆ ಎಂದರು.
ಮಮ್ಮಿ ಎನಿಸಿಕೊಳ್ಳುವ ಬದಲು ಅಮ್ಮ ಎನಿಸಿಕೊಂಡು ತಾಯಿ ದೇವರಾಗಿ. ಮಕ್ಕಳಿಗೆ ಅಗತ್ಯಕ್ಕೆ ತಕ್ಕಷ್ಟೇ ಮೊಬೈಲ್ ಕೊಡಿ. ಮೊಬೈಲ್ ಬಳಕೆಯಿಂದ ನಿದ್ರಾಹೀನತೆ, ಜ್ಞಾಪಕಶಕ್ತಿ ಕಡಿಮೆ ಆಗುತ್ತದೆ. ಮೊಬೈಲ್ ಬದಲು ಮಕ್ಕಳ ಕೈಯಲ್ಲಿ ಲಿಂಗ ಕೊಟ್ಟು ಧ್ಯಾನಕ್ಕೆ ಹಚ್ಚಿ. ಇದರಿಂದ ಜ್ಞಾಪಕಶಕ್ತಿ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.
ಸ್ಥಳೀಯ ಗುರು ಮಾರ್ಕಂಡೇಶ್ವರ ಪದ್ಮಶಾಲಿ ಗುರುಪೀಠದ ಪೀಠಾಧ್ಯಕ್ಷ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಬಡಮಕ್ಕಳಿಗೆ ತಾಯಿಯ ಪ್ರೀತಿ ತೋರಿದ ಶ್ರೀಗಳು ಮಾತೃ ಹೃದಯಿ ಆಗಿದ್ದರು. ಸಾಕ್ಷಾತ್ ಅನ್ನಪೂರ್ಣೆಯೇ ನೆಲೆಸಿರುವ ಸುಕ್ಷೇತ್ರ ಸಿದ್ಧಗಂಗಾ ಮಠ ಎಂದರು.
ವಿದೇಶಿ ಸಂಸ್ಕೃತಿಗೆ ಕಡಿವಾಣ ಹಾಕಿ, ಸ್ವದೇಶಿ ಸಂಸ್ಕೃತಿ ಉಳಿಸಿ, ಬೆಳೆಸಲು ಶ್ರಮಿಸಬೇಕು. ಕಾಯಕ ಮಾಡದ ಕಾಯ ನಿಶ್ಯಕ್ತವಾಗುತ್ತದೆ. ಅಂತಹ ಶರೀರ ನಿರರ್ಥಕ. ಕ್ರಿಯಾಶೀಲ ಚಟುವಟಿಕೆಗಳಿಂದ ಜೀವ ಮತ್ತು ಜೀವನ ಚೈತನ್ಯಶೀಲವಾಗುತ್ತದೆ ಎಂದು ತಿಳಿಸಿದರು.
ಹೇರೂರು ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ದಾನ, ಧರ್ಮದ ಗುಣ ಬೆಳೆಸಿಕೊಳ್ಳಿ. ಸತ್ಸಂಗದಲ್ಲಿ ಭಾಗವಹಿಸಿ. ಭಗವಂತನ ಸ್ಮರಣೆಯಿಂದ ಶಾಂತಿ, ನೆಮ್ಮದಿ ಪಡೆದು ಸಾರ್ಥಕ ಜೀವನ ಕಂಡುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಹನುಮಂತಪ್ಪ ಕರಾವಳಿ ಹಾಗೂ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಸೇವಾ ಸಮಿತಿ ಗೌರವಾಧ್ಯಕ್ಷ ಸದಾನಂದ ಶಿವಯೋಗಿಮಠ, ಅಧ್ಯಕ್ಷ ನಾಗಣ್ಣ ಮೆಣಸಿನಹಾಳ, ಕುಮಾರ ಕರಿಯಜ್ಜಿ, ಚೇತನ ಮಠದ, ನಾಗರಾಜ ತಿಪ್ಪಣ್ಣನವರ, ರುದ್ರಗೌಡ ಚಾವಡೇರ, ವಿಜಯಕುಮಾರ ಹಾದಿಮನಿ, ವೀರೇಶ ಹಾದಿಮನಿ, ಅಶೋಕ ಕರ್ಜಗಿ, ಪಂಚಾಕ್ಷರಿ ಹಾದಿಮನಿ, ಹನುಮಂತಪ್ಪ ಲ ದಾವಣಗೆರೆ, ಸತೀಶ ಚಾವಡೇರ, ಮಲ್ಲಿಕಾರ್ಜುನ ಕಾಟಿ, ಗಣೇಶ ಚೊಳೇನಹಳ್ಳಿ, ಸುರೇಶ ಅಂದಾನಪ್ಪನವರ, ಸುರೇಶ ರಡ್ಡೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.