ಹಿರೇಕೆರೂರ: ‘ನಾನು ಹಳ್ಳಿಯವನು. ನನಗೂ ಕೆಟ್ಟ ಭಾಷೆಯ ಅರಿವಿದೆ. ಆದರೆ, ನಮಗೆ ರಾಜಕೀಯ ಸಂಸ್ಕೃತಿ, ಬದ್ಧತೆ ಇರುವುದರಿಂದ ಬಿಜೆಪಿಯ ವರಷ್ಟು ಕೀಳುಮಟ್ಟದ ಭಾಷೆ ಬಳಸಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಚಿವ ಅನಂತಕುಮಾರ ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಹಾಗೂ ಗೌರವ ಇಲ್ಲ. ಕನಿಷ್ಠ ಸಂಸ್ಕೃತಿಯೂ ಇಲ್ಲ. ಸುಸಂಸ್ಕೃತ ಹಾಗೂ ಸಾಂವಿಧಾನಿಕ ಭಾಷೆ ಗೊತ್ತಿಲ್ಲದ ಅವರು ಸಚಿವ ಸ್ಥಾನಕ್ಕೆ ಯೋಗ್ಯರಲ್ಲ’ ಎಂದರು.
ಸಮಾಜದಲ್ಲಿ ಬೆಂಕಿ ಹಚ್ಚುವುದೇ ಬಿಜೆಪಿಯ ತಂತ್ರಗಾರಿಕೆ ಎಂದು ಆಪಾದಿಸಿದ ಅವರು, ‘ಲಾಠಿ ಚಾರ್ಚ್, ಟಿಯರ್ ಗ್ಯಾಸ್ ಹಾಗೂ ಗೋಲಿಬಾರ್ ನಡೆಸುವಂತೆ ಪ್ರತಿಭಟನೆ ಮಾಡಿ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾಗಿ ಸ್ವತಃ ಸಂಸದ ಪ್ರತಾಪ ಸಿಂಹ ಹೇಳಿಕೊಂಡಿದ್ದಾರೆ. ಹೀಗಾಗಿ ಹುಣಸೂರಿನಲ್ಲಿ ಗದ್ದಲ ಆರಂಭಿಸಿದ್ದಾರೆ’ ಎಂದು ದೂರಿದರು.
‘ಅಲ್ಲಿ, ಈ ಹಿಂದಿನಂತೆಯೇ ಮೆರವಣಿಗೆ ನಡೆಸುವಂತೆ ಪೊಲೀಸರು ಹೇಳಿದ್ದರು. ಆದರೆ, ಪ್ರತಾಪ ಸಿಂಹ ಸರ್ಕಾರದ ಕಾರನ್ನು ಬ್ಯಾರಿಕೇಡ್ ಮೇಲೆ ಹತ್ತಿಸಲು ಹೋಗಿದ್ದಾರೆ. ಅವ ರಿಗೆ ರಾಜಕೀಯ ಪ್ರೌಢಿಮೆ ಇಲ್ಲ. ‘ಇದು ಲೋಕಸಭಾ ಸದಸ್ಯ ಮಾಡುವ ಕೆಲಸವಾ’ ಎಂದು ಪ್ರಶ್ನಿಸಿದರು.
‘ನನ್ನ ಹೆಸರೇ ಸಿದ್ದರಾಮ. ರಾಮ ನನ್ನ ಹೆಸರಿನಲ್ಲಿದೆ’ ಎಂದ ಅವರು, ‘ನಮಗೂ ರಾಮ, ಹನುಮನ ಬಗ್ಗೆ ಭಕ್ತಿ ಗೌರವ ಇದೆ. ಬಿಜೆಪಿಗೆ ಶ್ರೀರಾಮನನ್ನು ಗುತ್ತಿಗೆ ಕೊಟ್ಟಿದ್ದಾರಾ? ರಾಮ ಹನುಮನ ಹೆಸರಿನಲ್ಲಿ ಬೆಂಕಿ ಇಡಬೇಡಿ’ ಎಂದರು.
ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ: ಬೆಂಬಲ ಬೆಲೆಗೆ ಮೆಕ್ಕೆ ಜೋಳ ಖರೀದಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಕೃಷಿ ಇಲಾಖೆಗೆ ಸೂಚನೆ ನೀಡಿದ್ದಾಗಿ ಸಿದ್ದರಾಮಯ್ಯ ಹೇಳಿದರು.
‘ಕೇಂದ್ರ ಸರ್ಕಾರವು ಒಂದು ಬೆಲೆ ನಿಗದಿ ಮಾಡಿದ್ದು, ಖರೀದಿಸಿದ ಮೆಕ್ಕೆ ಜೋಳವನ್ನು ಪಡಿತರ ಮೂಲಕವೇ ಮಾರಾಟ ಮಾಡಬೇಕು. ನಾವು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಇದು ರೈತ ವಿರೋಧಿ ನಿರ್ಧಾರ’ ಎಂದರು.
ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಮಹಿಳೆಯರನ್ನು ಕರೆದುಕೊಂಡು ಬರಲು ಮೊಬೈಲ್ ವಾಹನ ಸಂಪರ್ಕ ವ್ಯವಸ್ಥೆ ಮಾಡುವ ಕುರಿತು ಚಿಂತನೆ ಇದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.