ಹಿರೇಕೆರೂರ: ಕಳೆದ ಕೆಲವು ದಿನಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆ ಯಾಗುತ್ತಿರುವುದರಿಂದ ರೈತರ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ತಾಲ್ಲೂಕಿನ ಬಿತ್ತನೆ ಕ್ಷೇತ್ರದ ಶೇ.90 ರಷ್ಟು ಪ್ರದೇಶದಲ್ಲಿ ಗೋವಿನ ಜೋಳ ಹಾಗೂ ಹತ್ತಿ ಬಿತ್ತನೆಯಾಗಿದ್ದು, ಕಳೆ ತೆಗೆಯುವ ಕಾರ್ಯ ನಡೆದಿದೆ.
ಸಕಾಲದಲ್ಲಿ ಮಳೆಯಾಗದೇ ಇರು ವುದರಿಂದ ಬಿ.ಟಿ.ಹತ್ತಿ ಬಿತ್ತನೆ ಮಾಡಲು ಹೊಲವನ್ನು ಸಿದ್ಧಗೊಳಿಸಿದ್ದ ರೈತರು ತಮ್ಮ ನಿರ್ಧಾರ ಬದಲಿಸಿ ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ. ಈಗ ಜಿಟಿಜಿಟಿ ಮಳೆಯಾಗುತ್ತಿರುವ ಕಾರಣ ಗೋವಿನ ಜೋಳದಲ್ಲಿ ಕಸ ಬೆಳೆಯುತ್ತಿದ್ದು, ಬೆಳೆಯನ್ನು ಹರಗಲು ಹಾಗೂ ಕಳೆಯನ್ನು ತೆಗೆಯಿಸಿ ಯೂರಿಯಾ ಗೊಬ್ಬರ ನೀಡಲು ರೈತರು ಮುಂದಾಗಿದ್ದಾರೆ.
ಆದರೆ ಸಾಕಷ್ಟು ಯೂರಿಯಾ ಗೊಬ್ಬರ ಪೂರೈಕೆ ಆಗದೇ ಇರುವುದ ರಿಂದ ರೈತರು ತೊಂದರೆ ಎದುರಿಸು ತ್ತಿದ್ದು, ಗೊಬ್ಬರಕ್ಕಾಗಿ ಅಂಗಡಿಯಿಂದ ಅಂಗಡಿಗೆ ಅಲೆದಾಡಬೇಕಾದ ಸ್ಥಿತಿ ಎದುರಾಗಿದೆ. ಪರಿಣಾಮ ಕೆಲವು ವರ್ತಕರು ಹೆಚ್ಚಿನ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಗೊಬ್ಬರದ ಜೊತೆಗೆ ಅನಗತ್ಯವಾಗಿ ರುವ ಝಿಂಕ್, ಸಲ್ಫರ್ ಮೊದಲಾದವುಗಳನ್ನು ಕಡ್ಡಾಯವಾಗಿ ಕೊಳ್ಳಲೇಬೇಕು ಎಂದು ತಾಕೀತು ಮಾಡುತ್ತಿದ್ದಾರೆ. ಇದು ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ.
2000 ಟನ್ ಪೂರೈಸಲು ಮನವಿ
`ಕಳೆದ ವರ್ಷ ಜುಲೈ ಅಂತ್ಯದವರೆಗೆ ತಾಲ್ಲೂಕಿಗೆ 4700ಟನ್ ಯೂರಿಯಾ ಗೊಬ್ಬರ ಪೂರೈಕೆ ಮಾಡಲಾಗಿತ್ತು. ಈ ವರ್ಷ ಕೇವಲ 3588 ಟನ್ ಪೂರೈಕೆ ಮಾಡಲಾಗಿದೆ. ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಒತ್ತಡ ತಂದ ಪರಿಣಾಮ ಸರಬರಾಜು ಮಾಡಲಾದ 705 ಟನ್ ಯೂರಿಯಾ ಗೊಬ್ಬರವನ್ನು ತಾಲ್ಲೂಕಿನ 6 ಶಾಖೆಗಳ ಮೂಲಕ ರೈತರಿಗೆ ವಿತರಣೆ ಮಾಡಲಾ ಗಿದೆ~ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್.ಪಾಟೀಲ ತಿಳಿಸಿದ್ದಾರೆ.
`ಇನ್ನೂ 2000 ಟನ್ ಯೂರಿಯಾ ಗೊಬ್ಬರ ಪೂರೈಸಲು ಜಿಲ್ಲಾಧಿಕಾರಿಗಳು ಮತ್ತು ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಮಾಡಿಕೊಳ್ಳಲಾಗಿದೆ. ಸರಬ ರಾಜು ಆದ ತಕ್ಷಣ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮೂಲಕ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈಗ ದಾಸ್ತಾನು ಇರುವ ಡಿಎಪಿ ಗೊಬ್ಬರವನ್ನು ಹಳೆಯ ದರದಲ್ಲಿ ವಿತರಣೆ ಮಾಡಲಾಗುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು~ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.