ರಾಣೆಬೆನ್ನೂರು: ‘ರಾಜ್ಯದ ಅಭಿವೃದ್ಧಿಗೆ ಹಲವು ಭಾಗ್ಯಗಳನ್ನು ಅನುಷ್ಠಾನಕ್ಕೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೃತ್ತ ನೌಕರರ ಪಿಂಚಣಿ ಮೊತ್ತವನ್ನು ಹೆಚ್ಚಿಸಲಿ’ ಎಂದು ನಿವೃತ್ತ ಶಿಕ್ಷಕ ಎಸ್.ಆರ್.ಮಕರಿ ಹೇಳಿದರು.
ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಸಂಘದ ಸಭಾಭವನದಲ್ಲಿ ಭಾನುವಾರ ನಡೆದ ‘ಪಿಂಚಣಿದಾರರ ದಿನಾಚರಣೆ, ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಾರುಕಟ್ಟೆಯಲ್ಲಿ ಯಾವುದೇ ವಸ್ತುವಿನ ಬೆಲೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಪತ್ಯೇಕವಾಗಿ ಎಂದಿಗೂ ಇರುವುದಿಲ್ಲ. ಆದ್ದರಿಂದ, ಎಲ್ಲ ನೌಕರರಿಗೂ ಸಮಾನ ವೇತನ ನೀಡಬೇಕು. ಈ ಬಗ್ಗೆ ಸರ್ಕಾರಗಳು ಚಿಂತನೆ ಮಾಡಬೇಕು’ ಎಂದರು.
ನಿವೃತ್ತ ಪ್ರಾಧ್ಯಾಪಕ ಬಿ.ಬಿ.ನಂದ್ಯಾಲ ಮಾತನಾಡಿ, ಪಿಂಚಣಿದಾರರು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿವೃತ್ತ ಜೀವನವನ್ನು ಸುಖಮಯವಾಗಿ ನಡೆಸಬೇಕು ಎಂದರು. ಎಸ್.ಎಂ.ಸಂಕಮ್ಮನವರ, ಆರ್.ಡಿ. ಹೊಂಬರಡಿ, ವಿ.ಸಿ.ಪಾಟೀಲ, ವಿ.ವಿ.ಹರಪನಹಳ್ಳಿ, ಸಿ.ಎಸ್.ಶೀಲವಂತ, ಬಿ.ಬಿ.ಗೌಡರ ಇದ್ದರು.