ಕಲಬುರಗಿ: ನಗರದ ಶರಣಬಸವೇಶ್ವರ ಪದವಿಪೂರ್ವ ಕಾಲೇಜಿನ 11 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದರು.
‘ಜೆಇಇ ಮೇನ್ ಎರಡೂ ಹಂತದ ಪರೀಕ್ಷೆಗಳಲ್ಲಿ 115 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಆಯ್ಕೆ ಆಗಿದ್ದರು. ಅವರಲ್ಲಿ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರ್ಥಿ ಪ್ರೀತೇಶ ಜೋಗಧನಕರ್ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಉನ್ನತ
ವ್ಯಾಸಂಗಕ್ಕೆ ಆಯ್ಕೆಯಾಗಿದ್ದಾರೆ. ಶ್ರೇಯಸ್ ಜೆ. ಜಾಧವ್, ಅಭಿಷೇಕ ನಾಗರಾಜ, ಗುರುರಾಜ ಕೆ., ಪ್ರವೀಣ ಪವಾರ್, ಸುಮಿತ್ ಪವಾರ್, ಸಚಿನ್ ಶಿವರಾಜ, ಹರ್ಷ ಎಚ್., ವಿನಯರಾಜ್ ನಿನ್ನೆಕರ್, ತೇಜಸ್ವಿ ಎಚ್., ಜಯಪಾಲ ರೆಡ್ಡಿ ಅವರು ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ವ್ಯಾಸಂಗ ಮಾಡಲು ಅರ್ಹತೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶರಣಬಸವಪ್ಪ
ಅಪ್ಪ ಅವರು ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ತಲಾ ₹ 25 ಸಾವಿರ ನಗದು ಬಹುಮಾನ ವಿತರಿಸಿ, ಸನ್ಮಾನಿಸಿದರು. ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಸಂಘದ ಚೇರ್ಪರ್ಸನ್ ದಾಕ್ಷಾಯಣಿ ಎಸ್.ಅಪ್ಪ, ಡಾ.ಶ್ರೀಶೈಲ್ ಹೊಗಾಡೆ, ಡಾ.ಚಂದ್ರಕಾಂತ ಪಾಟೀಲ ಇದ್ದರು.