ನಗರದಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಐದು ಗ್ಯಾರಂಟಿಗಳಿಂದ ₹65 ಸಾವಿರ ಕೋಟಿ ಮಹಿಳೆಯರಿಗೆ ಹೋಗುತ್ತಿದೆ. ಬಸ್, ವಿದ್ಯುತ್ ಫ್ರೀಯಾಗಿದೆ. ₹2,000 ಮಹಿಳೆಯರ ಖಾತೆಗೆ ಹೋಗುತ್ತಿದೆ. ಅಕ್ಕಿಯೂ ಫ್ರೀ ಬರುತ್ತಿದೆ. ಇದರಿಂದ ತೊಂದರೆ ಆಗುತ್ತಿದ್ದು, ನಮ್ಮ ಹಣೆ ಬರಹಕ್ಕೆ ಜನರಿಂದ ಬೈಯಿಸಿಕೊಳ್ಳುವುದು ಬಂದಿದೆ’ ಎಂದು ಅಲವತ್ತುಕೊಂಡರು.
‘ಏನಾದರು ಕೆಲಸ ಮಾಡಬೇಕು ಅಂದುಕೊಂಡರೇ ಅಷ್ಟೂ ಹಣ ಗ್ಯಾರಂಟಿಗೆ ಹೋಗಿ ಹಣ ಕಡಿಮೆ ಬೀಳುತ್ತಿದೆ. ಏನು ಮಾಡುವುದು, ನಮ್ಮ ಅಲ್ಲಮಪ್ರಭು ಹಾಗೆ ಹೇಳಿದ, ಹೀಗೆ ಹೇಳಿದ ಎಂದು ಜನರು ಬೈಯುತ್ತಾರೆ. ಏನೇ ಆದರೂ ನಿಮ್ಮ ನಿರೀಕ್ಷೆಗಳನ್ನು ಹುಸಿ ಮಾಡದಂತೆ ಕೆಲಸ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
‘₹9 ಕೋಟಿ ಅನುದಾನದಲ್ಲಿ 38 ಹಳ್ಳಿ ಹಾಗೂ 23 ವಾರ್ಡ್ಗಳಿಗೆ ತಲಾ ₹20 ಲಕ್ಷ ಕೊಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನೂರು ಕೊಳವೆ ಬಾವಿಗಳನ್ನು ಕೊರೆಸುವ ಯೋಜನೆ ಹಾಕಿಕೊಂಡಿದ್ದೇವೆ. ನೀರು ಇರುವ ಜಾಗ ತೋರಿಸಿದರೆ ಕೊಳವೆ ಬಾವಿ ಕೊರೆಸುತ್ತೇವೆ. ನಗರದ ಸನಿಹದ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಂಡು ಅಭಿವೃದ್ಧಿ ಪಡಿಸುವಂತೆ ಈಗಾಗಲೇ ಮನವಿ ಮಾಡಿದ್ದೇನೆ’ ಎಂದು ಹೇಳಿದರು.