ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈಯಕ್ತಿಕ ಅಪರಾಧ ರಾಜಕೀಯಕ್ಕೆ ಬಳಕೆ: ಸಂಸದ ಜಾಧವ ವಿರುದ್ಧ ಪ್ರಿಯಾಂಕ್ ವಾಗ್ದಾಳಿ

Published 21 ಮೇ 2024, 5:57 IST
Last Updated 21 ಮೇ 2024, 5:57 IST
ಅಕ್ಷರ ಗಾತ್ರ

ಕಲಬುರಗಿ: ‘ಸಂಸದ ಡಾ. ಉಮೇಶ ಜಾಧವ, ಬಿಜೆಪಿಯ ಮುಖಂಡರು, ಸ್ವಯಂ ಘೋಷಿತ ಸ್ವಾಮೀಜಿ, ಸಮಾಜ ಸೇವಕರು ಎನಿಸಿಕೊಂಡವರು ವೈಯಕ್ತಿಕ ಕಾರಣಕ್ಕಾಗಿ ನಡೆಯುವ ಅಪರಾಧ ಪ್ರಕರಣಗಳನ್ನು ರಾಜಕೀಯಕ್ಕೆ ಬಳಸಿಕೊಂಡು, ಸರ್ಕಾರದ ಬಗ್ಗೆ ಜನರಿಗೆ ತಪ್ಪು ಸಂದೇಶ ಕೊಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

‘ಕೋಟನೂರಿನ ಹಲ್ಲೆ ಘಟನೆ ಮತ್ತು ಯುವಕರನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ್ದನ್ನು ಖಂಡಿಸುತ್ತೇನೆ. ಇಂತಹ ಘಟನೆಗಳು ನಡೆದಾಗ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ. ಘಟನೆಗಳಿಗೆ ಸಂಬಂಧಿಸಿದವರನ್ನು ಪೊಲೀಸರು ಬಂಧಿಸಿ, ಕಾನೂನು ಅಡಿ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ವೈಯಕ್ತಿಕ ಹಿನ್ನೆಲೆಯಲ್ಲಿ ನಡೆಯುವ ಬಹುತೇಕ ಅಪರಾಧ ಕೃತ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಮುಜುಗರ ತರಲು ಯತ್ನಿಸುವುದನ್ನು ಸಹಿಸುವುದಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬಿಜೆಪಿಯ ಮುಖಂಡರು ಸ್ವಯಂ ಘೋಷಿತ ಸ್ವಾಮೀಜಿಯ ಚಮಚಾಗಳಂತೆ ವರ್ತಿಸುತ್ತಿದ್ದಾರೆ. ಶ್ರೀರಾಮ ಸೇನೆಯ ಸಿದ್ದಲಿಂಗ ಸ್ವಾಮೀಜಿಗೆ ಯಾರಾದರೂ ಶುಭ ಕಾರ್ಯಕ್ಕೆ ಆಹ್ವಾನಿಸುತ್ತಾರಾ? ಮರ್ಯಾದಾ ಪುರುಷೋತ್ತಮನ ಹೆಸರಿನಲ್ಲಿ ಮರ್ಯಾದೆಗೇಡಿ ಕೆಲಸ ಮಾಡುವುದೇ ಸೇನೆಯ ಕೆಲಸವಾಗಿದೆ’ ಎಂದು ಕುಟುಕಿದರು.

‘ಸ್ವಾಮೀಜಿಯ ಸಂಘಟನೆಯು ಚುನಾವಣೆ ವೇಳೆ ಸಮಾಜದಲ್ಲಿ ಅಶಾಂತಿ ಮೂಡಿಸಿ, ಜನರಲ್ಲಿ ಭಯ ಹುಟ್ಟಿಸುತ್ತಿದೆ. ಅವರು ಬರೆದುಕೊಟ್ಟಂತೆ ಬಿಜೆಪಿ ನಾಯಕರು ಕುಣಿಯುತ್ತಾರೆ. ನಿಮ್ಮ ಅವಧಿಯಲ್ಲಿ ನಡೆದ ಘಟನೆಗಳಿಗೆ ಜಾತಿ ಲೇಪನ ಹಚ್ಚದೆ, ನಮ್ಮ ಅವಧಿಯಲ್ಲಿನ ಘಟನೆಗಳಿಗೆ ಜಾತಿಗಳನ್ನು ಎಳೆದು ತರುವುದು ಏಕೆ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ತಾಲಿಬಾನ್ ಆಡಳಿತವಿದೆ’ ಎಂದ ಜಾಧವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಜಿಲ್ಲಾಧಿಕಾರಿಯಿಂದ ಹಿಡಿದು ಕ್ಲರ್ಕ್‌ ವರೆಗಿನ ಹುದ್ದೆಗಳನ್ನು ಮಾರಾಟಕ್ಕೆ ಇಡಲಾಗಿತ್ತು’ ಎಂದು ರೌಡಿಗಳೊಂದಿಗೆ ಬಿಜೆಪಿ ಮುಖಂಡರು ಇರುವ ಫೋಟೊಗಳನ್ನು ಪ್ರದರ್ಶಿಸಿದರು.

‘ಸಿದ್ದಲಿಂಗ ಸ್ವಾಮೀಜಿ ಬಾಯಿಗೆ ಬಂದಂತೆ ಮಾತಾಡುತ್ತಿರುವುದನ್ನು ಗಮನಿಸುತ್ತಿದ್ದೇನೆ. ತಾಳ್ಮೆ ಮೀರಿದ್ದು, ಇನ್ನು ಮುಂದೆ ಯಾವುದನ್ನೂ ಸಹಿಸುವುದಿಲ್ಲ. ಯಾವನೋ ಥರ್ಡ್‌ ರೇಟ್, 30–40 ಪ್ರಕರಗಣಗಳಿರುವ ಶ್ರೀರಾಮ ಸೇನೆ ಅಧ್ಯಕ್ಷ ಸಿಎಂಗೆ ಡಾಕು ಎನ್ನುತ್ತಾರೆ. ಗಲ್ಲಿ ಗಲ್ಲಿ ಮೇ ಚಾಕು ಹೈ, ಸಿದ್ದರಾಮಯ್ಯ ಡಾಕು ಹೈ ಎಂದು ಘೋಷಣೆ ಕೂಗುತ್ತಾರೆ. ಇವತ್ತಲ್ಲಾ ನಾಳೆ ಸುಧಾರಿಸುವರು ಅಂತ ಸುಮ್ಮನಿದ್ದೆ. ಸುಧಾರಣೆ ಕಾಣುವ ಲಕ್ಷಣಗಳು ಕಾಣಿಸುತ್ತಿಲ್ಲ. ಸ್ವಾಮೀಜಿ ಮೇಲಿನ ಹಳೆಯ ಪ್ರಕರಣಗಳೇ ಅವರಿಗೆ ಮುಳುವಾಗಲಿವೆ’ ಎಂದು ಪ್ರಿಯಾಂಕ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ರಾಜಗೋಪಾಲರೆಡ್ಡಿ, ಶಿವಾನಂದ ಹೊನಗುಂಟಿ, ಭೀಮಣ್ಣ ಸಾಲಿ ಉಪಸ್ಥಿತರಿದ್ದರು.

‘ನಿರ್ದೇಶಕ ನಟರನ್ನು ಬಿಟ್ಟು ಪ್ರದರ್ಶಕರ ಮೇಲೆ ತಪ್ಪು ಹೇರಿಕೆ’

‘ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದ ನಿರ್ದೇಶಕ ನಿರ್ಮಾಪಕ ನಟ ಎಲ್ಲವೂ ಅವರೇ ಇದ್ದಾರೆ. ಅವರೆಲ್ಲರನ್ನು ಬಿಟ್ಟು ಸಿನಿಮಾ ಟೆಂಟ್ ಪ್ರದರ್ಶಕರ ಮೇಲೆ ತಪ್ಪು ಹೊರಿಸುತ್ತಿದ್ದಾರೆ. ನಿರ್ದೇಶಕ ನಿರ್ಮಾಪಕರು ನಟರ ಬಗ್ಗೆ ಮಾತಾಡುತ್ತಿಲ್ಲ’ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

‘ಆಡಿಯೊದಲ್ಲಿ ಮಾತನಾಡಿದ ಇಬ್ಬರೂ ಬಿಜೆಪಿಯವರು. ಈ ಬಗ್ಗೆ ಅಮಿತ್ ಶಾ ಅವರಿಗೆ ಮಾಹಿತಿ ಇತ್ತು. ಪ್ರಕರಣದ ಪ್ರಮುಖ ಆರೋಪಿಯ ಬಂಧನವಾಗಿಲ್ಲ. ಎಸ್‌ಐಟಿ ಪ್ರಾಥಮಿಕ ತನಿಖಾ ವರದಿಯೂ ಬಂದಿಲ್ಲ. ಆದರೆ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಶಿವರಾಮೇಗೌಡರದ್ದು ಎನ್ನಲಾದ ಆಡಿಯೊ ವಿಚಾರಕ್ಕೆ ಪ್ರತಿಕ್ರಿಯಿಸಿದರು.

‘ಶಿಕ್ಷಣದ ಫಲಿತಾಂಶ ಸುಧಾರಣೆಗೆ ಶೈಕ್ಷಣಿಕ ವರ್ಷದ ಆರಂಭದಿಂದ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ನೀತಿ ಸಂಹಿತೆ ಬಳಿಕ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT