ಕಲಬುರ್ಗಿ: ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್ಸಿ) ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರ ಹುದ್ದೆಗಳ ಭರ್ತಿಗೆ ಸೋಮವಾರ ನಗರದಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಯ ಕೇಂದ್ರಗಳಿಗೆ ಆಯೋಗದ ಸದಸ್ಯ ಡಾ.ರಂಗರಾಜ ವನದುರ್ಗ ಭೇಟಿ ನೀಡಿ ವೀಕ್ಷಿಸಿದರು.
ನಗರದ ಜಿಲ್ಲಾ ಕೋರ್ಟ್ ರಸ್ತೆಯ ಪಕ್ಕದ ಪಿಲ್ಲೂ ಹೋಮಿ ಇರಾಣಿ ಮಹಿಳಾ ಮಹಾವಿದ್ಯಾಲಯ, ಮಹರ್ಷಿ ವಿದ್ಯಾಮಂದಿರ ಶಾಲೆಯಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು. ಸುಸೂತ್ರ ಮತ್ತು ನಿಯಮಾನುಸಾರ ಪಾರದರ್ಶಕವಾಗಿ ಪರೀಕ್ಷೆಗಳು ನಡೆಯುತ್ತಿವೆಯೇ ಎಂದು ಅವರು ಪರಿಶೀಲಿಸಿದರು.
2 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು: ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಹಾಜರಾದ ಒಟ್ಟು 2052 ಪರೀಕ್ಷಾರ್ಥಿಗಳು ಪ್ರಥಮ ಪತ್ರಿಕೆ ಸಾಮಾನ್ಯ ಅಧ್ಯಯನ, ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣೆ ದ್ವಿತೀಯ ಪತ್ರಿಕೆ ಬರೆದರು.
ಈ ಸಂದರ್ಭದಲ್ಲಿ ಮಾತನಾಡಿದ ರಂಗರಾಜ ವನದುರ್ಗ, ‘ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಕೆಪಿಎಸ್ಸಿ ಪರೀಕ್ಷೆ ನಡೆದಿವೆ. ಅಭ್ಯರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆದರು’ ಎಂದರು.