ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ‘ರಾಜ್ಯಕ್ಕೆ ಒಪ್ಪಿತ ಆಡಳಿತ ನೀಡಿದ ಧರ್ಮಸಿಂಗ್‌’

ಧರ್ಮಸಿಂಗ್ ಒಡನಾಡಿಗಳಾದ ಐವರಿಗೆ ‘ಧರ್ಮಪ್ರಜೆ’ ಪ್ರಶಸ್ತಿ; ಸಮಾರಂಭದಲ್ಲಿ ಸ್ವಾಮೀಜಿ ಬಣ್ಣನೆ
Last Updated 24 ಡಿಸೆಂಬರ್ 2021, 15:52 IST
ಅಕ್ಷರ ಗಾತ್ರ

ಕಲಬುರಗಿ: ‘ಎನ್‌.ಧರ್ಮಸಿಂಗ್‌ ಅವರು ಜನಪ್ರತಿನಿಧಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಮುಖ್ಯಮಂತ್ರಿ ಆದ ಮೇಲಂತೂ ಇಡೀ ರಾಜ್ಯಕ್ಕೆ ಒಪ್ಪಿತವಾಗುವಂಥ ಮಾದರಿ ಆಡಳಿತ ನೀಡಿದರು’ ಎಂದು ಇಲ್ಲಿನಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ನಗರದ ಆರ್ಯನ್‌ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ, ದಿವಂಗತ ಧರ್ಮಸಿಂಗ್‌ ಅವರ 85ನೇ ಜನ್ಮದಿನಾಚರಣೆ ಹಾಗೂ ‘ಧರ್ಮಪ್ರಜೆ’ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಉತ್ತಮ ಆಡಳಿತಗಾರರಾಗಿದ್ದ ಧರ್ಮಸಿಂಗ್‌ ಅವರು ಭಾವುಕ ಜೀವಿಯೂ ಆಗಿದ್ದರು. ಸರ್ವಧರ್ಮಗಳ ಸಮನ್ವಯಕಾರರಾಗಿದ್ದರು. ಅವರ ಜಾತ್ಯತೀತ ನಿಲುವು ಇಂದು ರಾಜಕಾರಣಿಗಳಿಗೆ ಮಾದರಿ’ ಎಂದರು.

‘ಜಿಲ್ಲೆಯ ಸಮಸ್ಯೆಗಳನ್ನು ನೀಗಿಸುವಲ್ಲಿ ಅವರು ಆಸ್ಥೆ ವಹಿಸಿ ದುಡಿದರು. ರಾಷ್ಟ್ರೀಯ ಹೆದ್ದಾರಿ, ಹೈಕೋರ್ಟ್ ಸ್ಥಾಪನೆ, ವೀರಶೈವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ನಿವೇಶನ ಮಂಜೂರು,ಪಿಟಿಸಿ, ರಿಂಗ್‌ ರಸ್ತೆ, ಜಿಲ್ಲಾ ಪೊಲೀಸ್‌ ಭವನ, ಮಹಾನಗರ ಪಾಲಿಕೆಗೆ ಹೊಸ ಕಟ್ಟಡ... ಹೀಗೆ ಅವರು ಮಾಡಿದ ಹಲವು ಕೆಲಸಗಳು ಈಗ ಜನೋಪಯೋಗಿ ಆಗಿವೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸೇರಿ 371 (ಜೆ) ತಿದ್ದುಪಡಿ ಮಾಡುವಲ್ಲೂ ಧರ್ಮಸಿಂಗ್‌ ಅವರ ಪಾತ್ರ ದೊಡ್ಡದು’ ಎಂದೂ ಶ್ರೀಗಳು ಸ್ಮರಿಸಿದರು.

ಮುಖ್ಯ ಅತಿಥಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಬಿ.ಪಾಟೀಲ ಓಕಳಿ ಮಾತನಾಡಿ, ‘ರಾಜ್ಯದಲ್ಲಿ ಜಾತ್ಯತೀತ ತಳಹದಿ ಮೇಲೆ ಚುನಾವಣೆ ನಡೆದಿದ್ದು ಜೇವರ್ಗಿ ಕ್ಷೇತ್ರದಲ್ಲಿ. ಧರ್ಮಸಿಂಗ್‌ ಅವರ ಜನಪರವಾದ ನಿಲುವು ಆಯಸ್ಕಾಂತದಂತೆ ಜನರನ್ನು ಸೆಳೆಯುತ್ತಿತ್ತು. ಅವರ ಅಗಲಿಕೆಗೆ ಇಡೀ ರಾಜ್ಯವೇ ಕಂಬನಿ ಮಿಡಿದಿದ್ದನ್ನು ಕಂಡವರಿಗೆ ಅವರ ವ್ಯಕ್ತಿತ್ವ ಎಂಥದ್ದು ಎಂದು ಗೊತ್ತಾಗುತ್ತದೆ’ ಎಂದರು.

ಧರ್ಮಸಿಂಗ್ ಅವರ ಒಡನಾಡಿಗಳಾದ ಶರಣಪ್ಪ ವಿಭೂತಿ ನೆಲೋಗಿ, ಸಿದ್ದಣ್ಣ ಕವಾಲ್ದಾರ, ಹಬೀಬ್ ಪಟೇಲ್ ಮಾಲಿಪಾಟೀಲ, ಶಂಕರಗೌಡ ಮೂಲಿಮನಿ ಹಾಗೂ ಜಗದೇವಿ ಚವ್ಹಾಣ ಅವರಿಗೆ ‘ಧರ್ಮಪ್ರಜೆ’ ಪ್ರಶಸ್ತಿ ನೀಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕಾಂಗ್ರೆಸ್‌ನ ದಕ್ಷಿಣ ಬ್ಲಾಕ್‌ ಅಧ್ಯಕ್ಷ ನೀಲಕಂಠರಾವ ಮೂಲಗೆ, ಆರ್ಯನ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಗೋಲಪ್ಪ ರಾಜಾಪುರ, ವಿಶ್ವಜ್ಯೋತಿ ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಸಂಚಾಲಕ ಬಿ.ಎಂ.ಪಾಟೀಲ ಕಲ್ಲೂರ, ಕಾರ್ಯದರ್ಶಿ ಶಿವಯ್ಯ ಮಠಪತಿ, ಶಿವರಾಜ ಅಂಡಗಿ, ಮುಖಂಡರಾದ ಕಾಸೀಂ ಪಟೇಲ್ ಮುದಬಾಳ, ಸಿದ್ಧಮಲ್ಲಪ್ಪ ಮೋದಿ ನೆಲೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT