ಕಲಬುರಗಿ: ಕಾಂಗ್ರೆಸ್ ಮುಖಂಡ, ಮಾಜಿ ಮೇಯರ್ ಶರಣಕುಮಾರ್ ಮೋದಿ ಅವರ ಕಾರಿನಲ್ಲಿ ಸಾಗಿಸುತ್ತಿದ್ದ, ದಾಖಲೆ ಇಲ್ಲದ ₹ 1.99 ಕೋಟಿ ಹಣವನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಜಪ್ತಿ ಮಾಡಿದ್ದಾರೆ.
ಈ ಹಣವನ್ನು ರೈಲಿನಲ್ಲಿ ತರಲಾಗಿತ್ತು. ರೈಲಿನಿಂದ ಕಾರಿನಲ್ಲಿ ತುಂಬಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಹಣವನ್ನು ಕಾರಿನ ಸಮೇತ ಜಪ್ತಿ ಮಾಡಿದರು.
ನಂತರ ಶರಣಕುಮಾರ ಅವರನ್ನು ವಿಚಾರಣೆಗೆ ಒಳಪಡಿಸಿದರು. ಹಣವನ್ನು ಸೇಡಂ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಕೊಂಡೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ.
ಶರಣಕುಮಾರ್ ಮೋದಿ ಅವರು ಸಚಿವ ಈಶ್ವರ ಖಂಡ್ರೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಫೌಜಿಯಾ ತರನ್ನುಮ್, ‘ವ್ಯಕ್ತಿಯೊಬ್ಬರ ವಾಹನದಲ್ಲಿ ₹ 1,99,92,000 ಹಣ ಜಪ್ತಿಯಾಗಿದೆ ಎಂಬ ಮಾಹಿತಿ ಬಂದಿದೆ. ಐ.ಟಿ ಇಲಾಖೆಯವರು ಇನ್ನೂ ನನಗೆ ಪ್ರಾಥಮಿಕ ವರದಿ ನೀಡಿಲ್ಲ’ ಎಂದರು.
ಕಾಂಗ್ರೆಸ್ ಮುಖಂಡರಿಗೆ ಸೇರಿದ ಹಣ ಜಪ್ತಿ ಕುರಿತ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಆಯೋಗ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರಿಗೆ ಸೇರಿದ ₹ 4.80 ಕೋಟಿಯನ್ನು ಆಯೋಗ ಜಪ್ತಿ ಮಾಡಿದೆಯಲ್ಲ’ ಎಂದು ಹೇಳಿದರು.