ಕಮಲಾಪುರ (ಕಲಬುರಗಿ): ತಾಲ್ಲೂಕಿನ ಡೊಂಗರಗಾಂವ ಕ್ರಾಸ್ ಸಮೀಪದ ರಸ್ತೆಯಲ್ಲಿ ಭಾನುವಾರ ಕಟ್ಟಡ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟೆಂಪೋ ಉರುಳಿ ಬಿದ್ದು ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಹರಕಂಚಿ ಗ್ರಾಮದಲ್ಲಿ ವಾಸವಿರುವ, ಬಸವಕಲ್ಯಾಣ ತಾಲ್ಲೂಕಿನ ಗಿಲಕಿ ಗ್ರಾಮ ಮೂಲದ ಶಿವಪ್ಪ (35) ಮೃತ ಕಾರ್ಮಿಕ. ನಾಗೂರ ತಾಂಡಾದ ಸಾವನ್ ಗಣೇಶ ಪವಾರ್ ತೀವ್ರ ಗಾಯಗೊಂಡಿದ್ದು, ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಕ್ಕಂಚಿ ಗ್ರಾಮದ ಶಶಿಕಲಾ ಜಗದೇವಪ್ಪ ಇಂಗನಕಲ್, ಜಗದೇವಿ ಕಂಟೆಪ್ಪ ಯಳವಂತಗಿ, ಚಾಂದಸಾಬ್ ಶೇಖ್, ಶಣ್ಮುಖ ಸ್ವಾಮಿ ಹಾಗೂ ರಾಜೇಶ್ರೀ ರಾಘವೇಂದ್ರ ಸಹ ಗಾಯಗೊಂಡು ಕಮಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಟ್ಟಡ ನಿರ್ಮಾಣ ಕಾರ್ಮಿಕರು ಮನೆಯ ಮೇಲ್ಛಾವಣಿಯ ಕಾಂಕ್ರೀಟ್ ಕೆಲಸಕ್ಕಾಗಿ ನಾಗೂರ ಗ್ರಾಮದಿಂದ ಹುಮನಾಬಾದ್ಗೆ ತೆರಳುತ್ತಿದ್ದರು. ಮಾರ್ಗದ ಡೊಂಗರಗಾಂವ ಕ್ರಾಸ್ ಸಮೀಪ ಟೆಂಪೋ ವಾಹನದ ಮುಂದಿನ ಗಾಲಿ ಕಳಚಿ ಪಲ್ಟಿಯಾಗಿದೆ. ವಾಹನದಲ್ಲಿ ಕಾಂಕ್ರೀಟ್ ಮಿಶ್ರಣದ ಯಂತ್ರವೂ ಇತ್ತು. ವಾಹನದಲ್ಲಿ ಇದ್ದವರ ಪೈಕಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಮಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.