ಕಲಬುರಗಿ: ವಾರಾಂತ್ಯ ಸಾಲು ರಜೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ದಟ್ಟಣೆ ಕಂಡು ಬಂತು. ಬಹುತೇಕ ಹೋಟೆಲ್ಗಳು ಭರ್ತಿಯಾಗಿದ್ದವು.
ಪ್ರವಾಸಿಗರು ಕಲಬುರಗಿಯ ಬುದ್ಧವಿಹಾರ, ಕೆಬಿಎನ್ ದರ್ಗಾ, ಶರಣಬಸವೇಶ್ವರ ದೇವಸ್ಥಾನ, ಕೊಪ್ಪಳದ ಅಂಜನಾದ್ರಿ ಬೆಟ್ಟ ಹಾಗೂ ಯಾದಗಿರಿ ಜಿಲ್ಲೆಯ ಟೇಲರ್ ಮಂಜಿಲ್, ವೇಣುಗೋಪಾಲಸ್ವಾಮಿ ದೇವಸ್ಥಾನಗಳ ತಾಣಗಳಿಗೆ ಲಗ್ಗೆ ಹಾಕಿ ಕಣ್ತುಂಬಿಕೊಂಡರು.
ಕಲಬುರಗಿ ಜಿಲ್ಲೆ ದೇವಲಗಾಣಗಾಪುರದಲ್ಲಿ ದತ್ತ ಜಯಂತಿ ನಿಮಿತ್ತ ಕರ್ನಾಟಕ, ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದರು. ದೇಗುಲದ ರಸ್ತೆ ಕಾಲಿಡದಷ್ಟೂ ದಟ್ಟಣಿಯಿಂದ ಕೂಡಿತ್ತು. ವಾಹನಗಳ ನಿಲುಗಡೆಗೂ ಜಾಗ ಸಿಗದಷ್ಟು ದಟ್ಟಣೆ ಇತ್ತು.
ಬೀದರ್ನ ಬಹಮನಿ ಕೋಟೆ, ನರಸಿಂಹ ಝರಣಿಗೆ ಅಪಾರ ಪ್ರವಾಸಿಗರು ಕಂಡುಬಂದರು. ನರಸಿಂಹ ಝರಣಿಗೆ ಮಹಾರಾಷ್ಟ್ರ, ತೆಲಂಗಾಣದಿಂದ ಪ್ರವಾಸಿಗರು ಹೆಚ್ಚಾಗಿದ್ದು, ಭಕ್ತರು ಎರಡರಿಂದ ಮೂರು ಗಂಟೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಪಾರ ಸಂಖ್ಯೆಯ ಭಕ್ತರು ದರ್ಶನಕ್ಕಾಗಿ ಸೋಮವಾರ ಕಾದು ನಿಂತಿದ್ದರು