ಯಡ್ರಾಮಿ: ಉತ್ತರ ಕರ್ನಾಟಕದ ಪ್ರಮುಖ ಬೆಳೆ ಜೋಳ ಸೈನಿಕ ಹುಳಗಳ ಕಾಟದಿಂದ ಒಣಗಲಾರಂಭಿಸಿದ್ದು, ಮೊದಲೇ ಬರಗಾಲಕ್ಕೆ ತುತ್ತಾಗಿರುವ ಅನ್ನದಾತರಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.
ಮುಂಗಾರು, ಹಿಂಗಾರು ಎರಡೂ ಬೆಳೆ ಕೈಕೊಟ್ಟಿದ್ದು, ಇನ್ನೊಂದೆಡೆ ಕಾಲುವೆ ನೀರು ಸಹ ಅಷ್ಟಾಗಿ ಸಾಕಾಗುತ್ತಿಲ್ಲ. ಇದರಿಂದ ತೊಗರಿ, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಹಾಳಾಗಿವೆ. ಅಲ್ಪಸ್ವಲ್ಪ ಆಗಿದ್ದ ಮಳೆಗೆ ಬಿತ್ತಿದ್ದ ಜೋಳವಾದರೂ ಕೈ ಹಿಡಿಯುತ್ತದೆ ಎಂಬ ಆಶಾಭಾವನೆ ರೈತರಲ್ಲಿತ್ತು. ಆದರೆ ಈಗ ಅದು ಸಹ ಕೈಗೆ ಸಿಗಲ್ಲ ಎಂದು ಆತಂಕಗೊಂಡಿದ್ದಾರೆ.
ಹೈನುಗಾರಿಕೆಗೂ ಪೆಟ್ಟು: ತೀವ್ರ ಬರದಿಂದ ಕಂಗೆಟ್ಟಿರುವ ರೈತರು ಹೈನುಗಾರಿಕೆಯಲ್ಲಾದರೂ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕು ಎಂದುಕೊಂಡರೆ, ಆ ಜಾನುವಾರುಗಳಿಗೆ ಮೇವು ಬೇಕು. ಈಗ ಜಾನುವಾರುಗಳಿಗೂ ಮೇವು ಸಿಗದ ಸ್ಥಿತಿ ಬಂದೊದಗಿದೆ ಎನ್ನುತ್ತಾರೆ ರೈತರು.
ಗರಿ, ಸಸಿ ತಿನ್ನುವ ಕೀಟ: ಸೈನಿಕ ಹುಳಗಳ ಕಾಟದಿಂದ ಜೋಳ ರೈತರ ಕೈಸೇರದಂತಾಗಿದೆ. ಜೋಳದ ಗರಿಗಳು ಹಾಗೂ ಸಸಿಗಳನ್ನು ಹುಳುಗಳು ತಿಂದು ಹಾಕುತ್ತಿವೆ. ಇದರಿಂದ ಬೆಳೆ ಹಾಳಾಗುತ್ತಿದ್ದು, ಯಾವುದೇ ಔಷಧಿ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಮುಂದೇನು ಎಂದು ರೈತರು ಚಿಂತೆಗೆ ಒಳಗಾಗಿದ್ದಾರೆ.
ಪರಿಹಾರ ನಿರೀಕ್ಷೆ: ಈ ಹಿಂದೆ ಕಬ್ಬು, ತೊಗರಿ, ಸಜ್ಜೆ, ಹತ್ತಿ, ಮಕ್ಕೆಜೋಳ ಇತರೆ ಬೆಳೆಗಳು ಹಾನಿಯಾಗಿವೆ. ಇತ್ತೀಚಿಗೆ ಸರ್ಕಾರ ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡುವುದಾಗಿ ಹೇಳುತ್ತಿದೆ. ಸದ್ಯ ಬಿಳಿಜೋಳ ಸಹ ಕೈಕೊಡುವ ಲಕ್ಷಣಗಳಿದ್ದು, ಶೀಘ್ರ ಪರಿಹಾರ ನೀಡಲಿ ಎನ್ನುತ್ತಾರೆ ರೈತರು.