ಗುಲ್ಬರ್ಗ: ಕೆಲವು ದಶಕಗಳ ಹೋರಾಟ ಮೂಲಕ ರಾಜಕೀಯಕ್ಕೆ ಬಂದ ಡಿ.ಜಿ ಸಾಗರ (ಧೂಳಪ್ಪ) ಅವರ ವಿರುದ್ಧ ಈಗ ಯಾವುದೇ ಮೊಕದ್ದಮೆಗಳಿಲ್ಲ. ಅವರಿಗೆ ಸಾಲವೂ ಇಲ್ಲ. ಅಷ್ಟು ಮಾತ್ರವಲ್ಲ ಖಾಸಗಿ ಶಾಲಾ ಶಿಕ್ಷಕಿ ಆಗಿರುವ ಅವರ ಪತ್ನಿ ಬಳಿ ಬಂಗಾರವೂ ಇಲ್ಲ, ಸಾಗರ ಬಳಿ ಮನೆ ಇಲ್ಲ! ಪತಿ–ಪತ್ನಿಯ ಒಟ್ಟು ಆಸ್ತಿ ಮೌಲ್ಯ 73.49 ಲಕ್ಷ. ಇವರಿಗೆ ಮಗ ತುಷೀತ ಹಾಗೂ ಮಗಳು ತೇಜಸ್ವಿನಿ ಇದ್ದಾರೆ. ಇದು ಅವರು ನಾಮಪತ್ರ ಸಲ್ಲಿಕೆ ವೇಳೆ ನೀಡಿದ ವಿವರಗಳು.
ನಾಮಪತ್ರ: ಜೆಡಿಎಸ್ ಪಕ್ಷದ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಡಿ.ಜಿ ಸಾಗರ (ಧೂಳಪ್ಪ) ಸೋಮವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.
ಪಕ್ಷದ ಕಚೇರಿಯಿಂದ ಹೊರಟ ಅವರು, ಜಗತ್ ವೃತ್ತದಲ್ಲಿ ಬಸವೇಶ್ವರ ಪ್ರತಿಮೆ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗಳಿಗೆ ಹಾರ ಹಾಕಿದರು. ಬಳಿಕ ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿ (ಚುನಾವಣಾ ಕಚೇರಿ)ಗೆ ಬಂದರು.
ಬಳಿಕ ಮಾಜಿ ಉಪಸಭಾಪತಿ ಡೇವಿಡ್ ಸಿಮಿಯೋನ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ತಡಕಲ್ (ಗುಲ್ಬರ್ಗ), ನಾಗನಗೌಡ ಪಾಟೀಲ ಕಂದಕೂರ (ಯಾದಗಿರಿ), ಮುಖಂಡ ಕೇದಾರಲಿಂಗಯ್ಯ ಹಿರೇಮಠ ಅವರ ಜೊತೆ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಎನ್.ಪ್ರಸಾದ್ ಅವರಿಗೆ ನಾಮಪತ್ರದ ಪ್ರತಿ ಸಲ್ಲಿಸಿದರು.