ಹೊಸನಗರ: ಪಟ್ಟಣದ ಹೊರ ವಲಯದ ಕೊಡಚಾದ್ರಿ ಸರ್ಕಾರಿ ಪದವಿ ಕಾಲೇಜು ಸಮೀಪ ಹಾಗೂ ಮತ್ತಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿನಮಕ್ಕಿ ವಿನಾಯಕ ಉಡುಪರ ಅಡಿಕೆ ತೋಟದಲ್ಲಿ ಮಂಗ ಅಸಹಜ ಸಾವನ್ನಪ್ಪಿರುವುದು ವರದಿ ಆಗಿದೆ.
ಸಂಪೆಕಟ್ಟೆ ಸರ್ಕಾರಿ ಪ್ರೌಢಶಾಲಾ ಆಟದ ಮೈದಾನ ಪಕ್ಕದಲ್ಲಿ ಹಾಗೂ ಮತ್ತಿಕೈ ಎಂಬಲ್ಲಿ ಸಂಪೂರ್ಣ ಕೊಳತೆ ಸ್ಥಿತಿಯಲ್ಲಿ ಮಂಗದ ಶವ ದೊರೆತಿದ್ದು, ಅದನ್ನು ದಹನ ಮಾಡಲಾಗಿದೆ.
ತಾಲ್ಲೂಕಿನ ಮತ್ತಿಮನೆ, ಸಂಪೆಕಟ್ಟೆ ಹಾಗೂ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಣಗು ಸಂಗ್ರಹಿಸಿ, ಕೆಎಫ್ಡಿ ವೈರಾಣು ತಪಾಸಣೆಗೆ ಬೆಂಗಳೂರಿಗೆ ಕಳಹಿಸುವ ಕಾರ್ಯ ನಡೆಯುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇಂದು ಮುಂಜಾಗೃತಾ ಸಭೆ: ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗನ ಕಾಯಿಲೆ ಕುರಿತಂತೆ ಜ. 11ರಂದು ಬೆಳಿಗ್ಗೆ 10.30ಕ್ಕೆ ಮುಂಜಾಗ್ರತಾ ಸಭೆ ಕರೆಯಲಾಗಿದೆ. ಇದರಲ್ಲಿ ಆರೋಗ್ಯ, ಅರಣ್ಯ, ಪಶುವೈದ್ಯ ಇಲಾಖೆ, ಕಂದಾಯ ಇಲಾಖೆ, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.