ವಿರಾಜಪೇಟೆ: ಸಮೀಪದ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿಯಲ್ಲಿ ಪನ್ನಂಗಾಲತಮ್ಮೆ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಈಚೆಗೆ ಮುಕ್ತಾಯಗೊಂಡಿತು.
ಮೊದಲ ದಿನ ಉತ್ಸವ ಮೂರ್ತಿಯನ್ನು ಎಳನೀರಿನಿಂದ ಶುದ್ಧಗೊಳಿಸಿ ಪೂಜೆ ಸಲ್ಲಿಸಲಾಯಿತು. ಮುಂಜಾನೆ ಬಾಚೀರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ಬೆಳಿಗ್ಗೆ 10ರಿಂದ ದೇವರ ವಿಶೇಷ ದರ್ಶನ ನಡೆಯಿತು.
ಮರುದಿನ ಪನ್ನಂಗಾಲತಮ್ಮೆ ಉತ್ಸವದ ಪ್ರಮುಖ ಆಕರ್ಷಣೆಯಾದ ದೇವಿಯ ಕೊಡೆ ತರುವ ಧಾರ್ಮಿಕ ವಿಧಾನವನ್ನು ನೆರವೇರಿಸಲಾಯಿತು. ಈ ಸಂದರ್ಭ ಗದ್ದೆಯ ಮೂಲಕ ಕೊಡೆಯನ್ನು ಹೊತ್ತ ಭಕ್ತರು ದೇವಾಲಯವನ್ನು ಪ್ರವೇಶಿಸಿದರು.
ದೇವಾಲಯಕ್ಕೆ ಪ್ರದಕ್ಷಿಣೆ ಸಲ್ಲಿಸಿ ಕೊಡೆಯನ್ನು ಉತ್ಸವ ಮೂರ್ತಿಯ ಬಳಿ ಇಡಲಾಯಿತು. ಉತ್ಸವದ ಸಂದರ್ಭ ಭಕ್ತರು ತಾವು ಹೊತ್ತ ಹರಕೆಗಳನ್ನು ಸಮರ್ಪಿಸಿದರು. ಸಂಜೆ ದೇವಿಯ ಉತ್ಸವ ಮೂರ್ತಿಯು ದೇವಾಲಯಕ್ಕೆ ಪ್ರದಕ್ಷಿಣೆ ಬರುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ಉತ್ಸವದ ಸಂದರ್ಭ ಅನ್ನಸಂತರ್ಪಣೆ ನಡೆಯಿತು.
ಶಾಸಕ ಎ.ಎಸ್. ಪೊನ್ನಣ್ಣ ಅವರು ಉತ್ಸವದಲ್ಲಿ ಭಾಗವಹಿಸಿದ್ದರು. ಉತ್ಸವದಲ್ಲಿ ತಕ್ಕ ಮುಖ್ಯಸ್ಥರು, ಊರು ತಕ್ಕರು, ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಭಾಗವಹಿಸಿದ್ದರು.
ವಿರಾಜಪೇಟೆ ಸಮೀಪದ ಅರಮೇರಿಯಲ್ಲಿ ಪನ್ನಂಗಾಲತಮ್ಮೆ ದೇವಿಯ ವಾರ್ಷಿಕ ಉತ್ಸವದಲ್ಲಿ ಅನ್ನಸಂತರ್ಪಣೆ ನಡೆಯಿತು
ವಿರಾಜಪೇಟೆ ಸಮೀಪದ ಅರಮೇರಿಯಲ್ಲಿ ಪನ್ನಂಗಾಲತಮ್ಮೆ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಈಚೆಗೆ ನಡೆಯಿತು