ಗೋಣಿಕೊಪ್ಪಲ: ‘ಪರಿಸರ ಮಾನವನಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಅವನತಿಗೆ ಈಡಾಗುತ್ತಿದೆ’ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಪ್ರೊ.ದೇವಗಿರಿ ಆತಂಕ ವ್ಯಕ್ತಪಡಿಸಿದರು.
ಸ್ಥಳೀಯ ಅನುದಾನಿತ ಪ್ರೌಢಶಾಲೆಯಲ್ಲಿ ಟೈಗರ್ ಪಗ್ ಪರಿಸರ ಸಂಘದಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮತ್ತು ಮಡಿಕೇರಿ ಕೃಷಿ ವಿಸ್ತರಣಾ ಘಟಕಗಳ ಜಂಟಿ ಆಶ್ರಯದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು,‘ಪ್ರಕೃತಿಯಲ್ಲಿ ಎಲ್ಲವೂ ತಮಗೆ ಸೇರಿದ್ದೆಂದು ಮನುಷ್ಯ ಭಾವಿಸಿದ್ದಾನೆ. ಆದ್ದರಿಂದಲೇ ಪರಿಸರ ಅವನತಿಯತ್ತ ಸಾಗುತ್ತಿದೆ’ ಎಂದು ಹೇಳಿದರು.
ಮಡಿಕೇರಿಯ ಕೃಷಿ ವಿಸ್ತರಣಾ ಘಟಕದ ಮುಖ್ಯಸ್ಥ ಪ್ರೊ.ಆರ್.ಎನ್.ಕೆಂಚರೆಡ್ಡಿ ಮಾತನಾಡಿ,‘ವಿದ್ಯಾರ್ಥಿಗಳು ಸ್ಥಳೀಯ ಹಣ್ಣಿನ ಮರಗಳನ್ನು ಬೆಳೆಸಿ ಅವುಗಳನ್ನು ಕಾಪಾಡಿಕೊಳ್ಳಬೇಕು. ಇದರಿಂದ ಸ್ಥಳೀಯ ಸಸ್ಯ ಸಂಪತ್ತನ್ನು ಕಾಪಾಡಿದಂತೆ ಆಗುತ್ತದೆ. ಜೊತೆಗೆ ಜೇನು ಕೃಷಿಗೆ ಅನುಕೂಲವಾಗುತ್ತದೆ. ಒಂದು ಗಿಡವನ್ನು ನೆಟ್ಟು 3 ವರ್ಷ ಕಾಪಾಡಿದರೆ ಅವು ನಮ್ಮನ್ನು ನೂರಾರು ವರ್ಷ ಕಾಪಾಡುತ್ತವೆ’ ಎಂದರು.
ಪರಿಸರ ಸಂಘದ ಸಂಚಾಲಕ ಡಿ.ಕೃಷ್ಣಚೈತನ್ಯ ಮಾತನಾಡಿ,‘ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಎಂ.ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ಕೃಷಿ ವಿಸ್ತರಣಾ ಘಟಕದ ಡಾ.ಚಂದ್ರಶೇಖರ್ ಹಾಜರಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ ಮತ್ತು ಪರಿಸರ ಗೀತೆ ಸ್ಪರ್ಧೆ ಆಯೋಜಿಸಲಾಗಿತ್ತು.
ಮುಖ್ಯ ಶಿಕ್ಷಕ ಬಿ.ಟಿ.ರತೀಶ್ ರೈ, ವಿದ್ಯಾರ್ಥಿಗಳಾದ ಅಮೂಲ್ಯ, ಅಕ್ಷತಾ, ಶೃತಿ, ಕೀರ್ತನಾ ಹಾಜರಿದ್ದರು.