ಸುಂಟಿಕೊಪ್ಪ; ತೋಟ ಹಾಗೂ ತೋಟದ ಮನೆಗೆ ಅಳವಡಿಸಿದ್ದ ಕಬ್ಬಿಣದ ಗೇಟನ್ನು ಮುರಿದು ಹಾಕಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಕೃಷಿಕರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದ ಘಟನೆ ಸಮೀಪದ ನಾಕೂರು ಶಿರಂಗಾಲದಲ್ಲಿ ಗುರುವಾರ ರಾತ್ರಿ ನಡೆದಿದೆ.
ಗ್ರಾಮದ ಕಾಫಿ ಬೆಳೆಗಾರರಾದ ಕುಮುದಾ ಧರ್ಮಪ್ಪ ಅವರ ಮನೆಯ ಗೇಟನ್ನು ಸೊಂಡಿಲಿನಿಂದ ಕಿತ್ತು ಬಿಸಾಕಿದ ಕಾಡಾನೆ ತೋಟದೊಳಗೆ ತೆರಳಿ ಅಡಿಕೆ, ತೆಂಗು, ಬಾಳೆ ಫಸಲನ್ನು ತುಳಿದು ಹಾಗೂ ತಿಂದು ಹಾಕಿದೆ. ಜೊತೆಗೆ ಕಾಫಿ ಗಿಡಗಳನ್ನು ಮುರಿದು ಹಾಕಿದೆ ಎಂದು ಕುಮುದಾ ಧರ್ಮಪ್ಪ ತಿಳಿಸಿದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದಲೂ ಕಾಡಾನೆಗಳ ಹಾವಳಿ ಮಿತಿ ಮೀರುತ್ತಲೇ ಇದೆ. ದಿನಂಪ್ರತಿ ಈ ಭಾಗದ ಕಾಫಿ ತೋಟಗಳ ಫಸಲನ್ನು ಹಾನಿ ಪಡಿಸುತ್ತಲೇ ಇವೆ. ಹಾಗಾಗಿ ಅ ಕಾಡಾನೆಗಳ ಕಾಟದಿಂದಾಗಿ ಮನುಷ್ಯರ ಜೀವ ಉಳಿದರೇ ಸಾಕು ಎಂಬಂತಾಗಿದೆ ಎಂದು ಅವರು ನೊಂದು ನುಡಿದರು.
ಕಳೆದ ಕೆಲ ದಿನಗಳ ಹಿಂದೆ ಕಲ್ಲೂರು ಗ್ರಾಮದ ಅರುಣ ಕುಮಾರ್ ಎಂಬವರಿಗೆ ಸೇರಿದ ಕಟಾವಿಗೆ ಬಂದಿದ್ದ ಮರಗೆಣಸು ಫಸಲನ್ನು ಸಂಪೂರ್ಣವಾಗಿ ಹಾನಿ ಪಡಿಸಿತ್ತು.