ಮಡಿಕೇರಿ: ಪೊಲೀಸ್ ವಾದ್ಯ ವೃಂದದ ಸಂಗೀತ, ಪೊಲೀಸರು ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳ ಶಿಸ್ತು ಬದ್ಧವಾದ ನಡಿಗೆ, ಇದರ ಹಿಂದೆ ಮಹಾತ್ಮ ಗಾಂಧಿ ಚಿತಾಭಸ್ಮದ ಮೆರವಣಿಗೆ...
ಇವು ನಗರದಲ್ಲಿ ಮಂಗಳವಾರ ಕಂಡು ಬಂದ ಅಪರೂಪದ ದೃಶ್ಯಗಳು.
‘ಹುತಾತ್ಮರ ದಿನಾಚರಣೆ’ ಅಂಗವಾಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಸರ್ವೋದಯ ಸಮಿತಿಯಿಂದ ನಗರದಲ್ಲಿ ಶ್ರದ್ಧೆ ಹಾಗೂ ಶಿಸ್ತುಬದ್ಧವಾಗಿ ಮಹಾತ್ಮ ಗಾಂಧೀಜಿಯವರ ‘ಚಿತಾಭಸ್ಮ’ ಮೆರವಣಿಗೆ ಮಾಡಲಾಯಿತು.
ಮೊದಲಿಗೆ ಜಿಲ್ಲಾ ಖಜಾನೆಯಲ್ಲಿ ಇರಿಸಲಾಗಿದ್ದ ಮಹಾತ್ಮ ಗಾಂಧೀಜಿ ಅವರ ‘ಚಿತಾಭಸ್ಮ’ವನ್ನು ಹೊರತೆಗೆದು ಪುಷ್ಪಮಾಲೆಗಳಿಂದ ಗೌರವ ಸಮರ್ಪಿಸಲಾಯಿತು.
ನಂತರ, ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ಸದಸ್ಯರ ನೇತೃತ್ವದಲ್ಲಿ ಪೊಲೀಸ್ ವಾದ್ಯದೊಂದಿಗೆ ನಗರದ ಮಂಗೇರಿರ ಮುತ್ತಣ್ಣ ಹಾಗೂ ಜನರಲ್ ತಿಮ್ಮಯ್ಯ ವೃತ್ತದ ಮುಖ್ಯ ರಸ್ತೆ ಮೂಲಕ ಗಾಂಧೀಜಿ ಅವರ ಚಿತಾಭಸ್ಮವನ್ನು ಕೊಂಡೊಯ್ದು ಗಾಂಧಿ ಮಂಟಪ ಬಳಿಯ ಗಾಂಧಿ ಮೈದಾನದಲ್ಲಿರಿಸಿ ಗಾಂಧೀ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಇದೇ ವೇಳೆ ಪೊಲೀಸ್ ಮೀಸಲು ಪಡೆಯ ಸಬ್ ಇನ್ಸ್ಪೆಕ್ಟರ್ ಹನುಮಂತ ಕೌಜಲಗಿ ಮತ್ತು ತಂಡದವರು 3 ಸುತ್ತುಗಳ ಗುಂಡು ಹಾರಿಸುವ ಮೂಲಕ ರಾಷ್ಟ್ರಪಿತರಿಗೆ ಪೊಲೀಸ್ ಗೌರವಾರ್ಪಣೆ ಸಲ್ಲಿಸಲಾಯಿತು. ನಂತರ ಮೌನಾಚರಣೆ ನಡೆಯಿತು. ಪೊಲೀಸ್ ವಾದ್ಯ ವೃಂದವು ಸಿದ್ದೇಶ್ ಅವರ ನೇತೃತ್ವದಲ್ಲಿ ರಾಷ್ಟ್ರಗೀತೆ ಹಾಡಿ ಗಮನ ಸೆಳೆದರು.
ಬಳಿಕ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಗಾಂಧೀಜಿಯವರ ಮೆಚ್ಚಿನ ಭಜನಾ ಗಾಯನವನ್ನು ಲಿಯಾಕತ್ ಅಲಿ ಹಾಗೂ ಸಂತ ಮೈಕಲರ ಶಾಲೆಯ ಗೈಡ್ಸ್ ತಂಡದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಸರ್ವ ಧರ್ಮ ಪ್ರಾರ್ಥನೆಯೂ ನೆರವೇರಿತು.
ಸಂತೋಷ್ ಭಟ್ ಅವರು ಭಗವದ್ಗೀತೆ, ಫಾದರ್ ಜೈಸನ್ ಗೌಡರ್ ಅವರು ಬೈಬಲ್ ಹಾಗೂ ಮೌಲಾನ ಇಸಾಕ್ ಅವರು ಕುರಾನ್ ಸಂದೇಶಗಳನ್ನು ಬೋಧಿಸಿದರು.
ಸರ್ಕಾರಿ ಗೌರವಾರ್ಪಣೆ ಹಾಗೂ ಮೌನಾಚರಣೆಯ ನಂತರ ಮೆರವಣಿಗೆಯಲ್ಲಿ ಗಾಂಧೀಜಿ ಚಿತಾಭಸ್ಮವನ್ನು ಮತ್ತೆ ಜಿಲ್ಲಾ ಖಜಾನೆಯಲ್ಲಿ ಇರಿಸಲಾಯಿತು.
ಕಾಂಗ್ರೆಸ್ನ ಹಿರಿಯ ಮುಖಂಡ ಎಂ.ಸಿ.ನಾಣಯ್ಯ, ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಸರ್ವೋದಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುನಿರ್ ಅಹಮ್ಮದ್, ಸದಸ್ಯರಾದ ತೋರೇರ ಮುದ್ದಯ್ಯ, ಕೆ.ಟಿ.ಬೇಬಿ ಮ್ಯಾಥ್ಯು, ಅಂಬೆಕಲ್ಲು ನವೀನ್, ಎಸ್.ಪಿ.ವಾಸುದೇವ, ಎಂ.ಎನ್.ಸುಬ್ರಮಣಿ, ಜಿ.ಸಿ.ರಮೇಶ್, ಚಂದ್ರಶೇಖರ್, ರೇವತಿ ರಮೇಶ್, ಪ್ರಕಾಶ್ ಆಚಾರ್ಯ, ತೆನ್ನೀರ ಮೈನಾ, ಸ್ಕೌಟ್ಸ್ ಮತ್ತು ಗೈಡ್ಸ್ನ ಸಹ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್.ಮಂಜುನಾಥ್, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಸಹಾಯಕ ಖಜಾನಾಧಿಕಾರಿ ಶ್ಯಾಮ್ ಸುಂದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಣಜೂರು ಮಂಜುನಾಥ್, ಸ್ಕೌಟ್ಸ್ ಮತ್ತು ಗೈಡ್ಸ್ನ ಸಂಘಟಕಿ ದಮಯಂತಿ, ಸಹಾಯಕ ಗೈಡ್ ಆಯುಕ್ತೆ ಸುಲೋಚನಾ, ಸಂತ ಮೈಕಲರ ಶಾಲೆಯ ಶಿಕ್ಷಕಿಯರಾದ ಸಗಾಯ ಮೇರಿ, ರೀನಾ, ಸುನಿತಾ ಭಾಗವಹಿಸಿದ್ದರು.
ಜಿಲ್ಲಾ ಖಜಾನೆಯಲ್ಲಿರುವ ಗಾಂಧೀಜಿ ಚಿತಾಭಸ್ಮ ಪೊಲೀಸರಿಂದ ಗೌರವ ಸಮರ್ಪಣೆ ಗಾಂಧೀಜಿಗೆ ಪ್ರಿಯವಾದ ಗೀತೆ ಹಾಡಿದ ವಿದ್ಯಾರ್ಥಿಗಳು
ಮುಂದಿನ ವರ್ಷ ಸ್ಮಾರಕದಲ್ಲೇ ಹುತಾತ್ಮರ ದಿನಾಚರಣೆ; ಜಿಲ್ಲಾಧಿಕಾರಿ
‘ಮಹಾತ್ಮ ಗಾಂಧೀಜಿ ಅವರ ಸ್ಮಾರಕ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷ ಬಹುಶಃ ಸ್ಮಾರಕದಲ್ಲೇ ಹುತಾತ್ಮರ ದಿನಾಚರಣೆ ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು. ‘ದೇಶದಲ್ಲೆ ಕೇವಲ 2–3 ಕಡೆ ಮಾತ್ರ ಗಾಂಧೀಜಿ ಅವರ ಚಿತಾಭಸ್ಮ ಇದೆ. ಅದರಲ್ಲಿ ಕೊಡಗು ಜಿಲ್ಲೆಯೂ ಒಂದು ಎಂಬುದು ವಿಶೇಷ. ಗಾಂಧೀಜಿ ಅವರು ಸಾರಿದ ಶಾಂತಿಯ ಸಂದೇಶವನ್ನು ನಾವೂ ಪಾಲಿಸಬೇಕು. ಶಾಂತಿಯ ಹಾದಿಯಲ್ಲಿ ಮುನ್ನಡೆಯಬೇಕು’ ಎಂದರು.
ಗಾಂಧೀ ಸ್ಮಾರಕಕ್ಕೆ ಹಲವರ ಕೊಡುಗೆ; ಟಿ.ಪಿ.ರಮೇಶ್
ಸರ್ವೋದಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ‘ಗಾಂಧೀಜಿಯವರ ಚಿತಾ ಭಸ್ಮವನ್ನು ಕೊಳ್ಳಿಮಾಡ ಕರುಂಬಯ್ಯ ಅವರು ಕೊಡಗು ಜಿಲ್ಲೆಗೆ ತಂದಿದ್ದರು. ಅಂದಿನಿಂದ ನಗರದಲ್ಲಿ ಹುತಾತ್ಮರ ದಿನಾಚರಣೆಯನ್ನು ಜಿಲ್ಲಾಡಳಿತದ ಸಹಕಾರದಲ್ಲಿ ಸರ್ವೋದಯ ಸಮಿತಿ ವತಿಯಿಂದ ಹಮ್ಮಿಕೊಂಡು ಬರಲಾಗಿದೆ’ ಎಂದು ಹೇಳಿದರು. ಗಾಂಧಿ ಮಂಟಪದಲ್ಲಿ ಚಿತಾಭಸ್ಮವನ್ನು ಇಟ್ಟು ರಾಜ್ಘಾಟ್ ಮಾದರಿಯಲ್ಲಿ ಗಾಂಧಿ ಸ್ಮಾರಕ ನಿರ್ಮಿಸುವಲ್ಲಿ ಪ್ರಯತ್ನ ಮಾಡಲಾಗಿತ್ತು. ಅದಕ್ಕಾಗಿ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಬಿ.ಎಸ್.ಯಡಿಯೂರಪ್ಪ ಅವರಿಂದ ₹ 50 ಲಕ್ಷ ಅನುದಾನವನ್ನು ಈ ಹಿಂದೆಯೇ ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ವಿಧಾನ ಪರಿಷತ್ ಅನುದಾನದಡಿ ₹ 5 ಲಕ್ಷವನ್ನು ಪ್ರಕಟಿಸಿದ್ದಾರೆ. ಹಾಗೆಯೇ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರೂ ಸಹ ಅನುದಾನ ನೀಡಲಿದ್ದಾರೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.