ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಶ್ರೀಮಂಗಲ ಬಳಿಯ ಕುಮಟೂರಿನ ಕಳ್ಳೆಂಗಡ ಪೂವಯ್ಯ ಅವರಿಗೆ ಸೇರಿದ 2 ವರ್ಷದ ಕರು ಹುಲಿ ದಾಳಿಗೆ ಸಿಲುಕಿ ಮೃತಪಟ್ಟಿದೆ.
ಪೂವಯ್ಯ ಅವರು ಕರುವನ್ನು ಮೇಯಲೆಂದು ಗದ್ದೆಯ ಬಳಿ ಬಿಟ್ಟಿದ್ದರು. ಹುಲಿ ಕರುವನ್ನು ಕೊಂದು ಕಾಫಿ ತೋಟದ ಒಳಗೆ ಎಳೆದೋಯ್ದಿದೆ. ಮಾಲೀಕ ಪೂವಯ್ಯ ಕರುವನ್ನು ಹುಡುಕ ತೊಡಗಿದಾಗ ಬುಧವಾರ ಬೆಳಿಗ್ಗೆ ಕಾಫಿ ತೋಟದಲ್ಲಿ ಸತ್ತು ಬಿದ್ದಿರುವುದು ಗೋಚರಿಸಿದೆ.
ಹುಲಿಯ ಚಲನವಲನವನ್ನು ಕಂಡು ಹಿಡಿಯಲು ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಸರೆ ಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಕುಟ್ಟ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಹೇಳಿದರು.
ಕುಟ್ಟ ಪಶುವೈದ್ಯಾಧಿಕಾರಿ ಗಿರೀಶ್ ಮರಣೋತ್ತರ ಪರೀಕ್ಷೆ ನಡೆಸಿದರು. ಪೊನ್ನಂಪೇಟೆ ಡಿಆರ್ಎಪ್ಒ ದಿವಾಕರ್, ಗುರುನಾಥ್, ಆರ್ಆರ್ಟಿ ತಂಡದ ರಂಜು, ಹರೀಶ್, ರಂಜಿತ್, ಸಂಜಯ್, ವಿನು, ಭವನ್, ಸುಬ್ರಮಣಿ ಪಾಲ್ಗೊಂಡಿದ್ದರು.