ಸೋಮವಾರಪೇಟೆ: ‘ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಆಂಬುಲೆನ್ಸ್ ಸಂಚಾರ ಸ್ಥಗಿತಗೊಂಡಿದ್ದು, ರೋಗಿಗಳಿಗೆ ಅನಾನುಕೂಲ ಆಗುತ್ತಿದೆ’ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಆಸ್ಪತ್ರೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
‘ಕೊಡಗು ಗುಡ್ಡಗಾಡು ಜಿಲ್ಲೆ ಆಗಿರುವುದರಿಂದ ಗ್ರಾಮೀಣ ಭಾಗಗಳ ಜನರಿಗೆ ಹೆಚ್ಚಿನ ತೊಂದರೆ ಆಗುತ್ತಿದೆ. ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೋಗಿಗಳಿಗೆ ಸಮಸ್ಯೆ ಆಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ನೇತೃತ್ವದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಸಹೋದ್ಯೋಗಿಗಳ ಕೊರತೆಯಿಂದ ಈ ಬಗ್ಗೆ ಗಮನಹರಿಸಲು ಸಾಧ್ಯವಾಗಲಿಲ್ಲ. ಶೀಘ್ರ ವ್ಯವಸ್ಥೆ ಸರಿಪಡಿಸಲಾಗುವುದು’ ಎಂದು ಆಡಳಿತ ಅಧಿಕಾರಿ ಮೀನಾಕ್ಷಿ ಭರವಸೆ ನೀಡಿದರು.
‘ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಸೇರಿದಂತೆ ಅನೇಕ ಅಗತ್ಯಗಳ ಬಗ್ಗೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಆಸ್ಪತ್ರೆಯ ವೈದ್ಯ ಕಿರಣ್ ತಿಳಿಸಿದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ನಗರ ಕಾರ್ಯದರ್ಶಿ ರವೀಶ್, ತಾಲ್ಲೂಕು ಉಪಾಧ್ಯಕ್ಷ ಶಿವು, ಜಿಲ್ಲಾ ಕಾರ್ಮಿಕ ಘಟಕದ ಸಂಚಾಲಕ ಮಂಜುನಾಥ, ಯುವ ಘಟಕದ ಸಂಚಾಲಕ ನಿತನ್ ಮಿಟ್ಟು, ರವಿ ಬಿ.ವಿ., ಪುರುಷೋತ್ತಮ, ಇಬ್ರಾಹಿಂ ಭಾಗವಹಿಸಿದ್ದರು.