ಸಾಹಿತ್ಯ ಗೋಷ್ಠಿ, ಸಾಧಕರಿಗೆ ಸನ್ಮಾನ, ಕವಿಗೋಷ್ಠಿ

ನಾಪೋಕ್ಲು: ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿಯಲ್ಲಿ ಶನಿವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಗೋಷ್ಠಿ ಹಾಗೂ ಕವಿಗೋಷ್ಠಿಗಳು ಸಾಹಿತ್ಯಾಸಕ್ತರನ್ನು ತಣಿಸಿದವು. ಜತೆಗೆ, ಸಾಹಿತ್ಯ ಪರಿಷತ್ತು ಸಾಧಕರನ್ನು ಸನ್ಮಾನಿಸಿ ಅಭಿಮಾನ ಮೆರೆಯಿತು.
ಜವಾಹರ ನವೋದಯ ವಿದ್ಯಾಲಯದ ಅಧ್ಯಾಪಕ ಮಾರುತಿ ದಾಸಣ್ಣನವರ್ ಅವರು ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಗೋಷ್ಠಿಗೆ ಪುದಿಯ ನೆರವನ ರೇವತಿ ರಮೇಶ್ ಅವರು ಆಶಯನುಡಿಗಳ ಮೂಲಕ ಚಾಲನೆ ನೀಡಿದರು. ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿ.ವಿ.ಶಿವಪ್ಪ ಅವರು ‘ಯುವ ಪೀಳಿಗೆ ಮತ್ತು ಸಾಹಿತ್ಯ’ ಕುರಿತು, ಕೂಡಿಗೆಯ ಕ್ರೀಡಾಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಕೊಂಬಾರನ ಕುಂತಿ ಬೋಪಯ್ಯ ಅವರು ‘ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆ’ ಕುರಿತು ಸುಳ್ಯದ ಶಾರದ ಮಹಿಳಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ತಳೂರು ಸ್ವರ್ಣ ಕಿಶೋರ್ ಅವರು ‘ಸಾಹಿತ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ’ ಕುರಿತು ಮಾತನಾಡಿದರು.
ಸಾಹಿತಿ ಬಾರಿಯಂಡ ಆರ್. ಜೋಯಪ್ಪ ಅಧ್ಯಕ್ಷತೆಯಲ್ಲಿ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಿತು. ತೆನ್ನೀರ ಗಣೇಶ್ (ಕೃಷಿ), ಅಂಗನವಾಡಿ ಕಾರ್ಯಕರ್ತೆ ಬಿ.ಎಂ ಪುಷ್ಪಾವತಿ (ಮಕ್ಕಳ ಪಾಲನೆ), ವಿಮಲಾ ವಾಸುದೇವ್ (ನಾಟಿ ವೈದ್ಯ), ಸೂದನ ಡಾಲಿ (ಕ್ರೀಡೆ), ತನಲ್ ಸಂಸ್ಥೆ (ಸಮಾಜ ಸೇವೆ), ಪುಟ್ಟು (ಜನಪದ), ಕೇಶವ ಪರವ (ದೈವ ನರ್ತನ), ಮುಕಾಟಿ ದಿವ್ಯಾ (ಯೋಗ), ಬಿ.ಎಸ್ ಜೀಷ್ಮಾ (ಕ್ರೀಡೆ,ನೃತ್ಯ), ನೀರ್ಕಜೆ ಕೆ. ಆಕಾಶ್ (ತಂತ್ರಜ್ಞಾನ), ಎನ್.ಎ.ಪೊನ್ನಮ್ಮ (ಶಿಕ್ಷಣ), ಸುಧೀರ್ ಮಕ್ಕಿಮನೆ (ತೋಟ ಗಾರಿಕೆ), ಕುಟ್ಟೇಟಿರ ಕಾವೇರಿಯಪ್ಪ (ಕರಕುಶಲ), ಗೋವಿಂದಮ್ಮನ ಕೆ. ಮುತ್ತಪ್ಪ (ಸೇನೆ) ಅವರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಮೇಜರ್ ಡಾ.ಕುಶವಂತ್ ಕೋಳಿಬೈಲು ಪರವಾಗಿ ಬೇಕೋಟ್ ಮಕ್ಕಳ ಸಂಘದ ಅಧ್ಯಕ್ಷರು ಸನ್ಮಾನ ಸ್ವೀಕರಿಸಿದರು.
ಕವಿಗೋಷ್ಠಿ: ಕೋವಿಡ್, ಮನುಷ್ಯನ ಅನಿಶ್ಚಿತತೆ, ಬದುಕಿನ ಅರ್ಥ, ಕನ್ನಡದ ಬಗ್ಗೆ ಅಭಿಮಾನ ಸೇರಿದಂತೆ ವಿವಿಧ ವಿಷಯಗಳಲ್ಲಿ 14 ಕವಿಗಳು ಕವನ ವಾಚಿಸಿದರು. ವಿಸ್ಮಯಗಳ ಸುತ್ತ, ನಮ್ಮ ಹೆಮ್ಮೆಯ ಕರುನಾಡು, ನಾ ಸ್ವಾಭಿಮಾನಿ ಕನ್ನಡಿಗ, ಕನ್ನಡದ ಹಬ್ಬ, ಮೋಸದ ತೀರ್ಪನ್ನು ನೀಡದಿರಿ, ಜೀವನ ಮೈತ್ರಿ, ಕನ್ನಡ ಸೇರಿದಂತೆ ವಿವಿಧ ವಿಷಯಗಳ ಕುರಿತು ಕವಿಗಳು ಕವನ ವಾಚಿಸಿದರು. ಉಪನ್ಯಾಸಕಿ ಕೆ.ಜಯಲಕ್ಷ್ಮಿ ಆಶಯ ನುಡಿಗಳನ್ನಾಡಿದರು. ನಿವೃತ್ತ ಉಪನ್ಯಾಸಕಿ ಶಿವದೇವಿ ಅವನಿಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.