<p><strong>ಮಡಿಕೇರಿ:</strong> ರೈಲ್ವೆ ಸಂಪರ್ಕವೇ ಇರದ ಜಿಲ್ಲೆ ಎನಿಸಿದ ಕೊಡಗು ಜಿಲ್ಲೆಯಲ್ಲಿಯೂ ಒಂದು ರೈಲು ಓಡುತ್ತಿತ್ತು. ರಾಜಾಸೀಟ್ ಉದ್ಯಾನಕ್ಕೆ ಬಂದವರಿಗೆಲ್ಲ ಈ ರೈಲು ಅಚ್ಚುಮೆಚ್ಚಿನದ್ದಾಗಿತ್ತು. ರೈಲನ್ನೇ ನೋಡಿರದ ಇಲ್ಲಿನ ಬಡ ಮಕ್ಕಳಿಗಂತೂ ಅಪ್ಯಾಯಮಾನವಾಗಿತ್ತು. ಆದರೆ, ಈಗ ಅದು ನಿಂತು ವರ್ಷಗಳೇ ಉರುಳಿವೆ.</p>.<p>ಈಗ ಹಳೆಯ ರೈಲ್ವೆ ಟ್ರ್ಯಾಕ್, ತುಕ್ಕು ಹಿಡಿದು ನಿಂತಿರುವ ಬೋಗಿಗಳು ಗತಕಾಲದ ಪಳೆಯುಳಿಕೆಗಳನ್ನು ನೋಡಿದಂತೆ ಭಾಸವಾಗುತ್ತದೆ. ಇಂದಿಗೂ ಹಿರಿಯರು ಈ ರೈಲು ಓಡುತ್ತಿದ್ದ ಪರಿ, ಅದರಿಂದ ಕೇಳಿ ಬರುತ್ತಿದ್ದ ಚುಕುಬುಕು ಸದ್ದು, ಅದರ ಮೇಲೆ ತಾವು ಮಕ್ಕಳಿದ್ದಾಗ ವಿಹರಿಸುತ್ತಿದ್ದ ಬಗೆಗಳನ್ನು ನೆನೆಯುತ್ತಾರೆ. ಜೊತೆಗೆ, ಈ ರೈಲಿನ ಸ್ಥಿತಿ ಕಂಡು ಮಮ್ಮಲ ಮರುಗುತ್ತಾರೆ.</p>.<p>ಒಂದೆಡೆ ರೈಲ್ವೆ ಸಂಪರ್ಕವನ್ನೇ ಕಾಣದ ಕೊಡಗಿನ ಮಕ್ಕಳು ರೈಲಿನ ಅನುಭವ ಪಡೆಯಲು ಇದ್ದ ಏಕೈಕ ರೈಲು ಮೂಲೆ ಸೇರಿದ್ದರೆ, ಮತ್ತೊಂದೆಡೆ ಮೈಸೂರಿನ ರೈಲ್ವೆ ಸಂಗ್ರಹಾಲಯದಲ್ಲಿ ಮಕ್ಕಳ ರೈಲುಗಳು ಮಾತ್ರವಲ್ಲ, ಹಳೆಯ ರೈಲುಗಳಿಗೂ ಜೀವ ತುಂಬಲಾಗಿದೆ. ಅಕ್ಕಪಕ್ಕದ ಜಿಲ್ಲೆಯಲ್ಲಿರುವ ಈ ಅಗಾಧ ವ್ಯತ್ಯಾಸಕ್ಕೆ ದೂರುವುದಾದರೂ ಯಾರನ್ನು ಎಂಬ ಪ್ರಶ್ನೆ ಇಲ್ಲಿನ ಜನರದ್ದು.</p>.<p>ರಾಜಾಸೀಟ್ ಉದ್ಯಾನದಲ್ಲಿ ಮಕ್ಕಳ ರೈಲನ್ನು ಪುನರ್ ಆರಂಭಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿ ವರ್ಷಗಳೂ ಉರುಳಿವೆ. ಅಲ್ಲಿಂದಲೂ ತಜ್ಞರ ತಂಡ ಬಂದು ಪರಿಶೀಲನೆ ಮಾಡಿ, ವರದಿ ನೀಡಿದೆ. ಈ ವರದಿಯ ಮೇಲೆ ಯಾರೊಬ್ಬರೂ ಕಣ್ಣಾಯಿಸಿಲ್ಲ. ಇದೂ ಮೂಲೆ ಸೇರಿದ್ದು, ಮಕ್ಕಳನ್ನೇ ಕೇಂದ್ರೀಕರಿಸಿಕೊಂಡಿರುವ ಈ ಯೋಜನೆ ಹಳ್ಳ ಹಿಡಿದಿದೆ.</p>.<p>ಇಂತಹದ್ದೊಂದು ಯೋಜನೆ ಬದಲಿಗೆ ಈಚೆಗಷ್ಟೇ ಇಲ್ಲೊಂದು ಗಾಜಿನ ಸೇತುವೆ ನಿರ್ಮಿಸಲು ಇನ್ನಿಲ್ಲದ ಕಸರತ್ತು ನಡೆದಿತ್ತು. ಮುಗುಮ್ಮಾಗಿಯೇ ಟೆಂಡರ್ ಕರೆದು ಟೆಂಡರ್ ಸಹ ಆಗಿತ್ತು. ಆದರೆ, ಸ್ಥಳೀಯರ ಪ್ರಬಲ ವಿರೋಧದಿಂದಾಗಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. ಇಷ್ಟೆಲ್ಲ ಮಾಡುವವರಿಗೆ ಇಲ್ಲೊಂದು ಮಕ್ಕಳ ರೈಲು ಇತ್ತು ಎಂಬುದಾದರೂ ನೆನಪಿಗೆ ಬಾರದೇ ಹೋಗಿದ್ದು ಸೋಜಿಗ ಮೂಡಿಸುತ್ತದೆ ಎಂದು ಸ್ಥಳೀಯರು ದೂರುತ್ತಾರೆ.</p>.<p>ಗ್ರೇಟರ್ ರಾಜಾಸೀಟ್ ನಿರ್ಮಾಣವಾದಾಗಲೂ ಮಕ್ಕಳ ರೈಲಿಗೆ ಜೀವ ತುಂಬುವ ಕೆಲಸವನ್ನು ಯಾರೂ ಮಾಡಲಿಲ್ಲ. ಈ ಗ್ರೇಟರ್ ರಾಜಾಸೀಟ್ನಲ್ಲಿ ಮಕ್ಕಳಿಗಾಗಿ ಸಾಹಸ ಕ್ರೀಡೆಗಳಿಗೆ ಬೇಕಾದ ಪರಿಕರಗಳನ್ನು ಅಳವಡಿಸಲಾಯಿತಾದರೂ, ಅವು ಹಣ ಇದ್ದವರಿಗಷ್ಟೇ ಮೀಸಲಾಗಿವೆ. ಬಡ ಮಕ್ಕಳು ಈ ಆಟಗಳನ್ನು ಕೇವಲ ನೋಡಿಯೇ ಆನಂದಿಸುವ ಸನ್ನಿವೇಶ ಇದೆ. ಇಂತಹ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಮನರಂಜನೆಗಾಗಿಯಾದರೂ ಹಿಂದೆ ಇದ್ದಂತೆ ಮಕ್ಕಳ ರೈಲು ಇಲ್ಲಿ ಸಂಚರಿಸಬೇಕು ಎಂಬುದು ಜನರ ಒತ್ತಾಯ.</p>.<p>ಮುಂದೆ ನಡೆಯುವ ರಾಜಾಸೀಟ್ ಉದ್ಯಾನ ಅಭಿವೃದ್ಧಿ ಕುರಿತು ಸಭೆ ಅಥವಾ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಾದರೂ ಈ ವಿಷಯ ಪ್ರಸ್ತಾಪವಾಗಿ, ಮಕ್ಕಳ ರೈಲಿಗೆ ಮತ್ತೆ ಜೀವ ಬರಬಹುದೇ ಎಂಬ ನಿರೀಕ್ಷೆ ಇಲ್ಲಿನ ಜನರದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ರೈಲ್ವೆ ಸಂಪರ್ಕವೇ ಇರದ ಜಿಲ್ಲೆ ಎನಿಸಿದ ಕೊಡಗು ಜಿಲ್ಲೆಯಲ್ಲಿಯೂ ಒಂದು ರೈಲು ಓಡುತ್ತಿತ್ತು. ರಾಜಾಸೀಟ್ ಉದ್ಯಾನಕ್ಕೆ ಬಂದವರಿಗೆಲ್ಲ ಈ ರೈಲು ಅಚ್ಚುಮೆಚ್ಚಿನದ್ದಾಗಿತ್ತು. ರೈಲನ್ನೇ ನೋಡಿರದ ಇಲ್ಲಿನ ಬಡ ಮಕ್ಕಳಿಗಂತೂ ಅಪ್ಯಾಯಮಾನವಾಗಿತ್ತು. ಆದರೆ, ಈಗ ಅದು ನಿಂತು ವರ್ಷಗಳೇ ಉರುಳಿವೆ.</p>.<p>ಈಗ ಹಳೆಯ ರೈಲ್ವೆ ಟ್ರ್ಯಾಕ್, ತುಕ್ಕು ಹಿಡಿದು ನಿಂತಿರುವ ಬೋಗಿಗಳು ಗತಕಾಲದ ಪಳೆಯುಳಿಕೆಗಳನ್ನು ನೋಡಿದಂತೆ ಭಾಸವಾಗುತ್ತದೆ. ಇಂದಿಗೂ ಹಿರಿಯರು ಈ ರೈಲು ಓಡುತ್ತಿದ್ದ ಪರಿ, ಅದರಿಂದ ಕೇಳಿ ಬರುತ್ತಿದ್ದ ಚುಕುಬುಕು ಸದ್ದು, ಅದರ ಮೇಲೆ ತಾವು ಮಕ್ಕಳಿದ್ದಾಗ ವಿಹರಿಸುತ್ತಿದ್ದ ಬಗೆಗಳನ್ನು ನೆನೆಯುತ್ತಾರೆ. ಜೊತೆಗೆ, ಈ ರೈಲಿನ ಸ್ಥಿತಿ ಕಂಡು ಮಮ್ಮಲ ಮರುಗುತ್ತಾರೆ.</p>.<p>ಒಂದೆಡೆ ರೈಲ್ವೆ ಸಂಪರ್ಕವನ್ನೇ ಕಾಣದ ಕೊಡಗಿನ ಮಕ್ಕಳು ರೈಲಿನ ಅನುಭವ ಪಡೆಯಲು ಇದ್ದ ಏಕೈಕ ರೈಲು ಮೂಲೆ ಸೇರಿದ್ದರೆ, ಮತ್ತೊಂದೆಡೆ ಮೈಸೂರಿನ ರೈಲ್ವೆ ಸಂಗ್ರಹಾಲಯದಲ್ಲಿ ಮಕ್ಕಳ ರೈಲುಗಳು ಮಾತ್ರವಲ್ಲ, ಹಳೆಯ ರೈಲುಗಳಿಗೂ ಜೀವ ತುಂಬಲಾಗಿದೆ. ಅಕ್ಕಪಕ್ಕದ ಜಿಲ್ಲೆಯಲ್ಲಿರುವ ಈ ಅಗಾಧ ವ್ಯತ್ಯಾಸಕ್ಕೆ ದೂರುವುದಾದರೂ ಯಾರನ್ನು ಎಂಬ ಪ್ರಶ್ನೆ ಇಲ್ಲಿನ ಜನರದ್ದು.</p>.<p>ರಾಜಾಸೀಟ್ ಉದ್ಯಾನದಲ್ಲಿ ಮಕ್ಕಳ ರೈಲನ್ನು ಪುನರ್ ಆರಂಭಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿ ವರ್ಷಗಳೂ ಉರುಳಿವೆ. ಅಲ್ಲಿಂದಲೂ ತಜ್ಞರ ತಂಡ ಬಂದು ಪರಿಶೀಲನೆ ಮಾಡಿ, ವರದಿ ನೀಡಿದೆ. ಈ ವರದಿಯ ಮೇಲೆ ಯಾರೊಬ್ಬರೂ ಕಣ್ಣಾಯಿಸಿಲ್ಲ. ಇದೂ ಮೂಲೆ ಸೇರಿದ್ದು, ಮಕ್ಕಳನ್ನೇ ಕೇಂದ್ರೀಕರಿಸಿಕೊಂಡಿರುವ ಈ ಯೋಜನೆ ಹಳ್ಳ ಹಿಡಿದಿದೆ.</p>.<p>ಇಂತಹದ್ದೊಂದು ಯೋಜನೆ ಬದಲಿಗೆ ಈಚೆಗಷ್ಟೇ ಇಲ್ಲೊಂದು ಗಾಜಿನ ಸೇತುವೆ ನಿರ್ಮಿಸಲು ಇನ್ನಿಲ್ಲದ ಕಸರತ್ತು ನಡೆದಿತ್ತು. ಮುಗುಮ್ಮಾಗಿಯೇ ಟೆಂಡರ್ ಕರೆದು ಟೆಂಡರ್ ಸಹ ಆಗಿತ್ತು. ಆದರೆ, ಸ್ಥಳೀಯರ ಪ್ರಬಲ ವಿರೋಧದಿಂದಾಗಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. ಇಷ್ಟೆಲ್ಲ ಮಾಡುವವರಿಗೆ ಇಲ್ಲೊಂದು ಮಕ್ಕಳ ರೈಲು ಇತ್ತು ಎಂಬುದಾದರೂ ನೆನಪಿಗೆ ಬಾರದೇ ಹೋಗಿದ್ದು ಸೋಜಿಗ ಮೂಡಿಸುತ್ತದೆ ಎಂದು ಸ್ಥಳೀಯರು ದೂರುತ್ತಾರೆ.</p>.<p>ಗ್ರೇಟರ್ ರಾಜಾಸೀಟ್ ನಿರ್ಮಾಣವಾದಾಗಲೂ ಮಕ್ಕಳ ರೈಲಿಗೆ ಜೀವ ತುಂಬುವ ಕೆಲಸವನ್ನು ಯಾರೂ ಮಾಡಲಿಲ್ಲ. ಈ ಗ್ರೇಟರ್ ರಾಜಾಸೀಟ್ನಲ್ಲಿ ಮಕ್ಕಳಿಗಾಗಿ ಸಾಹಸ ಕ್ರೀಡೆಗಳಿಗೆ ಬೇಕಾದ ಪರಿಕರಗಳನ್ನು ಅಳವಡಿಸಲಾಯಿತಾದರೂ, ಅವು ಹಣ ಇದ್ದವರಿಗಷ್ಟೇ ಮೀಸಲಾಗಿವೆ. ಬಡ ಮಕ್ಕಳು ಈ ಆಟಗಳನ್ನು ಕೇವಲ ನೋಡಿಯೇ ಆನಂದಿಸುವ ಸನ್ನಿವೇಶ ಇದೆ. ಇಂತಹ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಮನರಂಜನೆಗಾಗಿಯಾದರೂ ಹಿಂದೆ ಇದ್ದಂತೆ ಮಕ್ಕಳ ರೈಲು ಇಲ್ಲಿ ಸಂಚರಿಸಬೇಕು ಎಂಬುದು ಜನರ ಒತ್ತಾಯ.</p>.<p>ಮುಂದೆ ನಡೆಯುವ ರಾಜಾಸೀಟ್ ಉದ್ಯಾನ ಅಭಿವೃದ್ಧಿ ಕುರಿತು ಸಭೆ ಅಥವಾ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಾದರೂ ಈ ವಿಷಯ ಪ್ರಸ್ತಾಪವಾಗಿ, ಮಕ್ಕಳ ರೈಲಿಗೆ ಮತ್ತೆ ಜೀವ ಬರಬಹುದೇ ಎಂಬ ನಿರೀಕ್ಷೆ ಇಲ್ಲಿನ ಜನರದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>