ಕುಶಾಲನಗರ: ಸಮಾಜದಲ್ಲಿ ಧಾರ್ಮಿಕತೆ ಉಳಿಸುವಲ್ಲಿ ಆರ್ಯವೈಶ್ಯರ ಕೊಡುಗೆ ಅಪಾರ ಎಂದು ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಅಮೃತ್ ರಾಜ್ ಹೇಳಿದರು.
ಇಲ್ಲಿನ ವಾಸವಿ ಯುವಜನ ಸಂಘದ ವತಿಯಿಂದ ವಾಸವಿ ಮಹಲ್ನಲ್ಲಿ ವಾಸವಿ ಜಯಂತಿ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಜನಾಂಗ ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ಸಮಾಜದಲ್ಲಿ ಈಗ ನಡೆಯುತ್ತಿರುವ ಹಲವು ಅನಾಹುತ, ದುಶ್ಚಟಗಳಿಗೆ ಸಾಮಾಜಿಕ ಜಾಲತಾಣ ಕಾರಣವಾಗುತ್ತಿದೆ. ವೈಯಕ್ತಿಕ ವಿಚಾರಗಳನ್ನು, ಫೋಟೋಗಳನ್ನು ಹಂಚಿಕೊಳ್ಳುವ ಮೊದಲು ಯೋಚಿಸಬೇಕು ಎಂದು ಸಲಹೆ ನೀಡಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಯುವಜನಾಂಗ ಸಾಮಾಜಿಕ ಸೇವೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.
ಉತ್ತಮ ಸಮಾಜದ ನಿರ್ಮಾಣ ಅಗಬೇಕೆಂದರೆ ಸಮಾನ ಮನಸ್ಕರು ಬೇಕು. ಬಡವರ್ಗಕ್ಕೆ ಆರ್ಥಿಕ ಸಹಾಯ ಕಲ್ಪಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕು. ಅದಕ್ಕೆ ಪೂರಕವಾಗಿ ಸಹಕಾರ ಸಂಘಗಳು ಉತ್ತಮ ಆಧಾರ ಸ್ಥಂಭ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಕೆ.ಎಸ್.ನಾಗೇಶ್, ಎನ್.ವಿ.ಬಾಬು, ಎಸ್.ಏನ್.ರಾಜೇಂದ್ರ, ನಿತಿನ್ ಗುಪ್ತ, ಚಿತ್ರ ರಮೇಶ್, ಆದರ್ಶ್, ಪ್ರಹ್ಲಾದ್ , ಕನ್ನಿಕಾ ವಿವಿದ್ದೋದೇಶ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ ಕೆ.ಆರ್.ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್, ಆರ್ಯವೈಶ್ಯ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಲ್.ಸತ್ಯನಾರಾಯಣ, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಯುವತಿಯರ ಸಂಘದ ಅಧ್ಯಕ್ಷೆ ಕವಿತಾ ಪ್ರವೀಣ್, ಬಾಲಕಿಯರ ಸಂಘದ ಅಧ್ಯಕ್ಷೆ ಸ್ಫೂರ್ತಿ, ಯುವಜನ ಸಂಘದ ಕಾರ್ಯದರ್ಶಿ ಅಂಜನ್ ಭಾಗವಹಿಸಿದ್ದರು.
ವಾಸವಿ ಜಯಂತಿ ಪ್ರಯುಕ್ತ ಇಲ್ಲಿನ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಒಂದು ವಾರದಿಂದ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳ್ಳಿಗ್ಗೆ ಕಾವೇರಿ ಹೊಳೆಯಿಂದ ಮಹಿಳೆಯರು ಗಂಗಾ ಪೂಜೆ ಮಾಡಿ ಪೂರ್ಣಕುಂಭ ಕಳಸ ಹೊತ್ತು ಮೆರವಣಿಗೆ ನಡೆಸಿದರು. ಅರ್ಚಕ ಪ್ರಮೋದ್ ಭಟ್, ಯೋಗೀಶ್ ಭಟ್ ದೇವಿಗೆ ವಿಶೇಷ ಅಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿದರು. ಜಯಂತಿ ಅಂಗವಾಗಿ ದೇವಿಗೆ ಸುವರ್ಣ ಮುಖವಾಡ ಹಾಕಲಾಗಿತ್ತು. ವಿವಿಧ ಹೂವುಗಳಿಂದ ದೇವಿಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕುಶಾಲನಗರ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಜಯಂತಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.
ಹಲವು ಸಾಧಕರಿಗೆ ಸನ್ಮಾನ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೇವಾ ಮನೋಭಾವ ಬೆಳೆಸಿಕೊಳ್ಳಲು ಸಲಹೆ