ವಿರಾಜಪೇಟೆ: ಅಕ್ರಮ ಸಕ್ರಮ ಸಮಿತಿಯ ವಿರಾಜಪೇಟೆ ತಾಲ್ಲೂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್.ಕೆ. ಅಬ್ದುಲ್ ಸಲಾಂ ಅವರನ್ನು ಶುಕ್ರವಾರ ಸಮೀಪದ ಆರ್ಜಿ ಗ್ರಾಮದ ಕಲ್ಲುಬಾಣೆಯ ಕಲ್ಲುಬಾಯ್ಸ್ ಯುವಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪುರಸಭೆ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ‘ಕಡು ಬಡವರು ಸರ್ಕಾರಿ ಜಾಗದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿದ್ದರೂ, ಇಂದಿಗೂ ಅವರಿಗೆ ದಾಖಲೆಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಸಮಿತಿಯ ಮೂಲಕ ಈ ಕಾರ್ಯ ಸಾಧ್ಯವಾಗಲಿ. ಇದರಿಂದ ಬಡವರು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವಂತಾಗಲಿ’ ಎಂದರು.
ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರಜಿತ ಕಾರ್ಯಪ್ಪ ಮಾತನಾಡಿ, ‘ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಅನೇಕ ಕಡುಬಡವರು ತುಂಡು ಭೂಮಿಯ ಹಕ್ಕನ್ನು ಹೊಂದಿಲ್ಲದಿರುವುದು ವಿಷಾದನೀಯ. ಅಕ್ರಮ ಸಕ್ರಮ ಸಮಿತಿಯನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತಾಗಲಿ’ ಎಂದರು.
ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಟಿ. ಬಷೀರ್ ಮಾತನಾಡಿ, ‘ಗ್ರಾಮದ ರಸ್ತೆ ವಿಸ್ತರಣೆ ಮತ್ತು ಆರೋಗ್ಯ ಕೇಂದ್ರದ ಅವಶ್ಯಕತೆಯಿದ್ದು, ಈ ಬಗ್ಗೆ ಶಾಸಕರ ಗಮನ ಸೆಳೆದು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಿ’ ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯ ಮತೀನ್, ಕಾಂಗ್ರೆಸ್ ಮುಖಂಡ ಜಿ.ಜಿ. ಮೋಹನ್, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಹಾಗೂ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ಮಾತನಾಡಿದರು.
ವೇದಿಕೆಯಲ್ಲಿ ಕಲ್ಲುಬಾಯ್ಸ್ ಸಂಘದ ಅಧ್ಯಕ್ಷ ರಹೀಂ, ಮುಖಂಡ ಜಾಫರ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.