ಮಡಿಕೇರಿ: ‘ಜಿಲ್ಲೆಯಲ್ಲಿ ಪೂರ್ವಿಕರು ಉಳಿಸಿಕೊಂಡು ಬಂದಿರುವ ದವಸ ಭಂಡಾರಗಳ ಸಹಕಾರ ಸಂಘಗಳನ್ನು ಮುಂದಿನ ಪೀಳಿಗೆಗೂ ಉಳಿಸುವುದಕ್ಕಾಗಿ ಎಲ್ಲರೂ ಕೈಜೋಡಿಸಬೇಕು’ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎ.ಕೆ.ಮನು ಮುತ್ತಪ್ಪ ಮನವಿ ಮಾಡಿದರು.
ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಶುಕ್ರವಾರ ಸಹಕಾರ ದವಸ ಭಂಡಾರಗಳ ಸಂಘಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 87 ದವಸ ಭಂಡಾರಗಳಿವೆ. ಇಡೀ ದೇಶದಲ್ಲಿಯೇ ಮಾದರಿ ಭಂಡಾರಗಳನ್ನು ಜಿಲ್ಲೆಯಲ್ಲಿ ಕಾಣಬಹುದು. ಇವುಗಳನ್ನು ಪುನಶ್ಚೇತನಗೊಳಿಸುವಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕೋರಿದರು.
ವಿರಾಜಪೇಟೆ ತಾಲ್ಲೂಕು ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ ಕೆ.ಎಂ.ಸೋಮಯ್ಯ ಮಾತನಾಡಿ, ದವಸ ಭಂಡಾರಗಳಿಗೆ ಹಿಂದೆ ಬಹಳ ಮಹತ್ವವಿತ್ತು. ಬ್ಯಾಂಕ್ಗಳು ಇಲ್ಲದ ಕಾಲದಲ್ಲಿ ಇವುಗಳ ಪಾತ್ರ ಮಹತ್ವದ್ದಾಗಿತ್ತು ಎಂದು ತಿಳಿಸಿದರು.
ನಬಾರ್ಡ್ನ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ಮಾತನಾಡಿ, ‘ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಂಬಲ ಬೆಲೆ ದೊರೆಯುವಂತಾಗಬೇಕು. ರೈತ ಉತ್ಪಾದಕರ ಸಂಸ್ಥೆಗಳ ಮೂಲಕ ಆರ್ಥಿಕ ಚಟುವಟಿಕೆ ಕೈಗೊಳ್ಳಬೇಕು’ ಎಂದು ಹೇಳಿದರು.
ಸಹಕಾರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಗುರುಮಲ್ಲಪ್ಪ, ಸಹಕಾರಿ ಯೂನಿಯನ್ ವ್ಯವಸ್ಥಾಪಕಿ ಮಂಜುಳಾ, ಸಿಇಒ ಯೋಗೇಂದ್ರ ನಾಯಕ್ ಇದ್ದರು.