ಕಾಬೂಲ್: ತಾಲಿಬಾನ್ ಉಗ್ರರಿಂದ ಅಪಹರಣಕ್ಕೀಡಾಗಿರುವ ಭಾರತದ ಏಳು ಎಂಜಿನಿಯರ್ಗಳ ಪತ್ತೆಗಾಗಿ ಅಫ್ಗಾನಿಸ್ತಾನದ ಭದ್ರತಾಪಡೆ ಸ್ಥಳೀಯ ಬುಡಕಟ್ಟು ಜನಾಂಗದ ಮುಖಂಡರ ನೆರವು ಪಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭದ್ರತಾ ಪಡೆಗಳು ಮತ್ತು ಸ್ಥಳೀಯಸರ್ಕಾರಿ ಅಧಿಕಾರಿಗಳು ಭಾರತೀಯರ ಬಿಡುಗಡೆಗೆ ಶ್ರಮಿಸುತ್ತಿದ್ದಾರೆ. ಯಾವುದೇ ಸಂಘಟನೆಗಳು ಅಪಹರಣದ ಹೊಣೆ ಹೊತ್ತುಕೊಂಡಿಲ್ಲ ಎಂದಿವೆ.
ಅಪಹರಣಕ್ಕೊಳಗಾದವರು ಉತ್ತಮ ಆರೋಗ್ಯ ಹೊಂದಿದ್ದಾರೆ. ಅವರನ್ನು ಒತ್ತೆಯಲ್ಲಿ ಇರಿಸಿರುವ ಸ್ಥಳವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
‘ಹೆದ್ದಾರಿಯಲ್ಲಿ ಬಿಳಿ ಬಣ್ಣದ ಕಾರೊಂದನ್ನು ಶಸ್ತ್ರಸಜ್ಜಿತ ಉಗ್ರರು ತಡೆದು, ಅವರ ನಿಯಂತ್ರಣದ ಪ್ರದೇಶಕ್ಕೆ ಅಪಹರಿಸಿ ಕೊಂಡೊಯ್ದಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ’ ಎಂದು ಮಾಧ್ಯಮಗಳು ವರದಿಯಲ್ಲಿ ಹೇಳಿವೆ.
ಕೆಇಸಿ ವಿದ್ಯುತ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತದ ಎಂಜಿನಿಯರ್ಗಳನ್ನು ತಾಲಿಬಾನ್ ಉಗ್ರರು ಭಾನುವಾರ ಅಪಹರಿಸಿದ್ದರು. ಇವರು ಪ್ರಯಾಣಿಸುತ್ತಿದ್ದ ವಾಹನದ ಚಾಲಕನನ್ನೂ ಅಪಹರಿಸಲಾಗಿತ್ತು.
ಭಾರತೀಯರ ಬಿಡುಗಡೆಗಾಗಿ ಅಫ್ಗಾನಿಸ್ತಾನದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ಭಾರತದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.