ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಇತಿಹಾಸ ಪ್ರಸಿದ್ಧ ಬಾಡಗರಕೇರಿಯ ಮೃತ್ಯುಂಜಯ ದೇವಸ್ಥಾನದ ವಾರ್ಷಿಕೋತ್ಸವಕ್ಕೆ ಶುಕ್ರವಾರ ತೆರೆ ಬಿದ್ದಿತು.
ಫೆ. 19 ರಂದು ಕೊಡಿಮರ ನಿಲ್ಲಿಸುವ ಮೂಲಕ ಶ್ರದ್ಧಾಭಕ್ತಿಯ ವಾರ್ಷಿಕೋತ್ಸವಕ್ಕೆ ಚಾಲನೆ ದೊರಕಿತ್ತು. ಶುಕ್ರವಾರ ಕೊಡಿಮರ ಇಳಿಸುವ ಮೂಲಕ ತೆರೆ ಕಂಡಿತು. ವಿಶೇಷ ಪೂಜೆಗಳೊಂದಿಗೆ ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಶಾಸ್ತೊಕ್ತವಾಗಿ 12 ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಿತು. ಸಂಜೆ 5 ಗಂಟೆಗೆ ಭಕ್ತರು ಉತ್ಸವ ಮೂರ್ತಿಯ ದರ್ಶನ ಪಡೆದರು. ಅವಭೃತ ಸ್ನಾನದ ಬಳಿಕ ರಾತ್ರಿ 8.30 ಗಂಟೆಗೆ ಊರಿನ ಎಲ್ಲಾ ಮಹಿಳೆಯರು ಸಾಂಪ್ರದಾಯಿಕ ಉಡುಗೆಯೊಂದಿಗೆ ತಳಿಯತಕ್ಕಿ ಬೊಳಕ್ನೊಂದಿಗೆ ಉತ್ಸವ ಮೂರ್ತಿಯನ್ನು ಸ್ವಾಗತಿಸಿದರು. ಸಂಜೆ 6ಕ್ಕೆ ಶ್ರೀನಿವಾಸ ತಂಡದವರಿಂದ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು. ವರ್ಣರಂಜಿತ ದೀಪಗಳೊಂದಿಗೆ ದೇವಾಲಯವನ್ನು ಅಲಂಕರಿಸಲಾಗಿತ್ತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು, ಸಂಜೆ ಸಿಡಿಸಿದ ರಂಗು ರಂಗಿನ ಸಿಡಿಮದ್ದುಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.
ದೇವಸ್ಥಾನ ದೇವತಕ್ಕ ಅಣ್ಣೀರ ಕುಟುಂಬದ ದಾದ ಗಣಪತಿ, ನಾಡ್ ತಕ್ಕ ಕಾಯಪಂಡ ಕುಟುಂಬದ ಅಯ್ಯಪ್ಪ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಲ್ಯಮೀದೇರಿರ ಸುರೇಶ್, ಗೌರವ ಕಾರ್ಯದರ್ಶಿ ಕಾಯಪಂಡ ಸತು ಚಿಣ್ಣಪ್ಪ, ಉಪಾಧ್ಯಕ್ಷ ಚೋನಿರ ಮಧು ಕಾರ್ಯಪ್ಪ, ಪ್ರಧಾನ ಅರ್ಚಕ ಗಿರೀಶ್ ಹಾಜರಿದ್ದರು.