ಕಾರ್ಮಿಕರ ದಿನಾಚರಣೆ ಅಂಗವಾಗಿ ಸಿಐಟಿಯು ಜಿಲ್ಲಾ ಸಮಿತಿ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘಟನೆಗಳ ಮೂಲಕ ಒಗ್ಗಟ್ಟಿನಿಂದ ಹೋರಾಟಗಳು ನಡೆದಾಗ ಮಾತ್ರ ಅದಕ್ಕೆ ಶಕ್ತಿ ನೀಡಿದಂತಾಗುತ್ತದೆ. ಆಗ ಮಾತ್ರ ಸರ್ಕಾರ ಮತ್ತು ನಾಯಕರು ಸ್ಪಂದಿಸುತ್ತಾರೆ. ಒಗ್ಗಟ್ಟಿನಿಂದ ಎಲ್ಲವನ್ನು ಬಗೆಹರಿಸಿಕೊಳ್ಳಲು ಸಾಧ್ಯ. ಕಾರ್ಮಿಕರು ಸಂಘಟನೆ ಮೂಲಕ ತಮ್ಮ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತದೆ ಎಂದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ.ಆರ್.ಭರತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮದ್ಯಪಾನದಿಂದ ಕಾರ್ಮಿಕರು ಜೀವನವನ್ನು ಹಾಳು ಮಾಡಿಕೊಳ್ಳಬಾರದು. ದುಷ್ಚಟ ಬಿಟ್ಟು ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸಬೇಕು. ಕಾರ್ಮಿಕರ ಮಕ್ಕಳೂ ಕಾರ್ಮಿಕರಾಗಿ ಉಳಿಯದೆ, ಉತ್ತಮ ಶಿಕ್ಷಣ ಪಡೆದು ಉನ್ನತ ಉದ್ಯೋಗವನ್ನು ಪಡೆದುಕೊಳ್ಳಬೇಕು. ದಿನನಿತ್ಯದ ಸಾಮಗ್ರಿಗಳ ಬೆಲೆ ಏರಿಕೆಯಿಂದ ಬಡ ಕಾರ್ಮಿಕರ ಕುಟುಂಬಗಳು ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ತಿಳಿಸಿದರು.
ಸಿಐಟಿಯು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ, ಮಹಿಳೆಯರ ಮೇಲಿನ ಶೋಷಣೆ ನಿಂತಿಲ್ಲ. ಬಿಸಿಯೂಟ ಯೋಜನೆ ನೌಕರರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು ಸೇರಿದಂತೆ ಉಳಿದ ಎಲ್ಲಾ ಕಾರ್ಮಿಕರು ಸಂಘಟನೆಯ ಸದಸ್ಯತ್ವ ಪಡೆಯಬೇಕು ಎಂದರು.
ಸಂಘಟನೆಯ ಜಿಲ್ಲಾ ಖಜಾಂಚಿ ಎನ್.ಡಿ.ಕುಟ್ಟಪ್ಪ ಅವರು ಮಾತನಾಡಿದರು. ವೇದಿಕೆಯಲ್ಲಿ ಸಿಐಟಿಯು ಜಿಲ್ಲಾ ಸಮಿತಿಯ ಸಂಚಾಲಕಿ ಪದ್ಮಿನಿ, ಹರಿದಾಸ್, ರಾಚಪ್ಪಜಿ ಹಾಗೂ ಶಾಜಿ ರಮೇಶ್ ಉಪಸ್ಥಿತರಿದ್ದರು. ಕಾರ್ಮಿಕರು ಸಭೆಯಲ್ಲಿ ಭಾಗವಹಿಸಿದ್ದರು.