ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಂಡಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ನಿರ್ಮಿಸಿರುವ ಮುಖ್ಯಶಿಕ್ಷಕರ ಕೊಠಡಿ ಕಾಮಗಾರಿ ಪರಿಶೀಲನೆಗೆ ತೆರಳಿದ ಜನಪ್ರತಿನಿಧಿಗಳಿಗೆ ಮುಖ್ಯಶಿಕ್ಷಕಿ ಕೊಠಡಿಯ ಕೀಲಿ ಇಲ್ಲ ಎಂದು ವಾಪಸ್ ಕಳುಹಿಸಿದ ಘಟನೆ ಸೋಮವಾರ ನಡೆದಿದೆ.
ಕೊಠಡಿ ಪರಿಶೀಲಗೆ ತೆರಳಿದ್ದ ತಂಡ ಮುಖ್ಯಶಿಕ್ಷಕಿ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದೆ.
ಮುಖ್ಯಶಿಕ್ಷಕರ ಕೊಠಡಿಯ ಕಾಮಗಾರಿ ಪರಿಶೀಲನೆಗೆಂದು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸುಬ್ರಮಣಿ, ಸದಸ್ಯರಾದ ಪುರುಷೋತ್ತಮ್, ದಿವಾಕರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಶಾಲೆಗೆ ತೆರಳಿದ್ದರು. ಕೊಠಡಿಯ ಕೀಲಿ ನೀಡುವಂತೆ ಶಾಲೆಯ ಮುಖ್ಯಶಿಕ್ಷಕಿ ಅವರನ್ನು ಕೇಳಿದಾಗ ಅವರು, ಬೀಗದ ಕೀ ನನ್ನ ಬಳಿ ಇಲ್ಲ. ಗುತ್ತಿಗೆದಾರರ ಬಳಿ ಇದೆ ಎಂದು ಹೇಳಿ ಕಳುಹಿಸಿದ್ದಾರೆ.
ಮುಖ್ಯಶಿಕ್ಷಕರ ಕೊಠಡಿಯ ಒಳಗೆ ಶೌಚಾಲಯ ಕೊಠಡಿ ಕುಸಿದಿದೆ, ಕಟ್ಟಡ ಸೋರುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ತಂಡ ಪರಿಶೀಲನೆಗೆ ತೆರಳಿತ್ತು ಎಂದು ತಿಳಿದುಬಂದಿದೆ.