ಮಡಿಕೇರಿ: ‘ತಲಚೇರಿ ಹಾಗೂ ಮೈಸೂರು ರೈಲು ಮಾರ್ಗಕ್ಕೆ ಒಪ್ಪಿಗೆ ನೀಡುವ ಪ್ರಶ್ನೆಯೇ ಇಲ್ಲ’ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಕೊಡಗು ಏಕೀಕರಣ ರಂಗ ಮತ್ತು ವೈಲ್ಡ್ಲೈಫ್ ಫಸ್ಟ್ ಸಂಘಟನೆ ಮುಖಂಡರು ಸೋಮವಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ವೇಳೆ ಸಚಿವರು ಈ ರೀತಿಯ ಭರವಸೆ ನೀಡಿದ್ದಾರೆ. ರೈಲು ಮಾರ್ಗದಿಂದ ಕಾವೇರಿ ನದಿ ಹಾಗೂ ವನ್ಯಜೀವಿಗಳಿವೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ನಿಯೋಗವು ಗಮನಸೆಳೆದಿತ್ತು.
‘ಈ ಮಾರ್ಗದ ಅನುಷ್ಠಾನದಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲಾಗುವ ಪರಿಣಾಮಗಳ ಸ್ಪಷ್ಟ ಅರಿವಿದೆ. 1960ರಿಂದಲೂ ತಲಚೇರಿ– ಮೈಸೂರು ರೈಲು ಮಾರ್ಗವನ್ನು ತಡೆಹಿಡಿಯಲಾಗಿದೆ’ ಎಂದರು.
ವೈಲ್ಡ್ ಲೈಫ್ ಫಸ್ಟ್ ಸಂಘಟನೆ ಕೆ.ಎಂ.ಚಿಣ್ಣಪ್ಪ, ಕೊಡಗು ಏಕೀಕರಣ ರಂಗದ ಎ.ಎ.ತಮ್ಮು ಪೂವಯ್ಯ, ಪ್ರವೀಣ್ ಭಾರ್ಗವ್, ಎಚ್.ಎನ್.ಎ.ಪ್ರಸಾದ್ ನಿಯೋಗದಲ್ಲಿದ್ದರು.
**
ಸಂಸತ್ತಿನಲ್ಲಿ ಚರ್ಚೆ?
ಈ ಕುರಿತು ಮಾರ್ಚ್ 7, 8ರಂದು ಸಂಸತ್ತಿನಲ್ಲಿ ಚರ್ಚಿಸುವುದಾಗಿ ಸಚಿವ ಪಿಯೂಷ್ ಗೋಯೆಲ್ ಅವರು ಭರವಸೆ ನೀಡಿದ್ದಾರೆ ಎಂದು ಕೊಡಗು ಏಕೀಕರಣ ರಂಗದ ನಿರ್ದೇಶಕ ಪಿ.ಎಂ.ಮುತ್ತಣ್ಣ ತಿಳಿಸಿದರು.
‘ಲಕ್ಷದ್ವೀಪದ ಸಂಸದರು ಈ ಕುರಿತು ಪ್ರಶ್ನೆ ಕೇಳಲಿದ್ದಾರೆ. ಅದಕ್ಕೆ ಉತ್ತರಿಸಲು ಸೂಕ್ತ ತಯಾರಿ ಮಾಡಿಕೊಳ್ಳಲಾಗಿದೆ. ಪರಿಸರಕ್ಕೆ ಹಾನಿ ಉಂಟು ಮಾಡುವ ಯಾವುದೇ ಯೋಜನೆಯನ್ನು ಜಾರಿಗೊಳಿಸುವುದಿಲ್ಲವೆಂದು ಸಂಸತ್ತಿನಲ್ಲಿ ವಿವರಿಸುವುದಾಗಿ ತಿಳಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.