ಕೋಲಾರ: ರಾಜ್ಯ ಸರ್ಕಾರ 2018–19ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಕಟಿಸಿದ್ದು, ಜಿಲ್ಲೆಯ ಐದು ಗ್ರಾಮ ಪಂಚಾಯಿತಿಗಳು ಪುರಸ್ಕಾರಕ್ಕೆ ಆಯ್ಕೆಯಾಗಿವೆ.
ಬಂಗಾರಪೇಟೆ ತಾಲ್ಲೂಕಿನ ಸೂಲಿಕುಂಟೆ, ಕೋಲಾರ ತಾಲ್ಲೂಕಿನ ಬೆಗ್ಲಿಹೊಸಹಳ್ಳಿ, ಮಾಲೂರು ತಾಲ್ಲೂಕಿನ ಶಿವಾರಪಟ್ಟಣ, ಮುಳಬಾಗಿಲು ತಾಲ್ಲೂಕಿನ ಶಿವಾರಪ್ಟಣ ಹಾಗೂ ಶ್ರಿನಿವಾಸಪುರ ತಾಲ್ಲೂಕಿನ ರೋಣೂರು ಗ್ರಾ.ಪಂಗಳು ಪುರಸ್ಕಾರಕ್ಕೆ ಆಯ್ಕೆಯಾಗಿವೆ.
ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ಮತ್ತು ಆರ್ಥಿಕ ಸಾಧನೆ ಮಾಡಿದ ಗ್ರಾ.ಪಂಗಳನ್ನು ಗುರುತಿಸಿ ಪ್ರತಿ ವರ್ಷ ಈ ಪುರಸ್ಕಾರ ನೀಡುತ್ತಿದೆ. ಪಂಚಾಯಿತಿಗಳ ಕಾರ್ಯವೈಖರಿಯನ್ನು ಮತ್ತಷ್ಟು ಉತ್ತಮಗೊಳಿಸುವುದು ಪುರಸ್ಕಾರದ ಮೂಲ ಉದ್ದೇಶ.
ಪ್ರಶಸ್ತಿ ಪ್ರದಾನ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬುಧವಾರ (ಅ.2) ಗಾಂಧಿಜಯಂತಿಯಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಿಗೆ ₨ 5 ಲಕ್ಷ ಚೆಕ್, ಪಾರಿತೋಷಕ ಹಾಗೂ ಅಭಿನಂದನಾ ಪತ್ರ ನೀಡಿ ಪುರಸ್ಕರಿಸಲಾಗುತ್ತದೆ.
ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನೈರ್ಮಲ್ಯ, ಚರಂಡಿ ಸ್ವಚ್ಛತೆ, ರಸ್ತೆ ಹಾಗೂ ಸಾರ್ವಜನಿಕ ಸ್ಥಗಳಲ್ಲಿ ಸ್ವಚ್ಛತೆ ನಿರ್ವಹಣೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪ್ರಮುಖ ಮಾನದಂಡಗಳು. ಜತೆಗೆ ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತಾತ್ಮಕ ಸುಧಾರಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ, ವೈಯಕ್ತಿಕ ಶೌಚಾಲಯ ನಿರ್ಮಾಣ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅನುಷ್ಠಾನ, ರಸ್ತೆ ಮತ್ತು ಸೇತುವೆ ಸೌಲಭ್ಯ, ಬೀದಿ ದೀಪ, ಕುಡಿಯುವ ನೀರಿನ ಸೌಕರ್ಯದ ಆಂಶ ಗಮಿಸಲಾಗುತ್ತದೆ.
ಪ್ರಮುಖ ಮಾನದಂಡ: ವಸತಿರಹಿತರಿಗೆ ವಿವಿಧ ಯೋಜನೆಗಳಡಿ ವಸತಿ ಸೌಕರ್ಯ ಕಲ್ಪಿಸಿರುವುದು, ಗ್ರಾಮಗಳಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆ, ಚರಂಡಗಿಳ ನಿರ್ಮಾಣ, ಶಾಸನ ಬದ್ಧ ಅನುದಾನಗಳ ಸಮರ್ಪಕ ಬಳಕೆ, ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಟಾನ ಸಹ ಪುರಸ್ಕಾರಕ್ಕೆ ಪ್ರಮುಖ ಮಾನದಂಡಗಳಾಗಿವೆ. ಜತೆಗೆ ಕಾಲಕಾಲಕ್ಕೆ ಗ್ರಾಮ ಸಭೆ ನಡೆಸುವುದು, ಹಣಕಾಸು ವ್ಯವಹಾರದ ಲೆಕ್ಕಪತ್ರಗಳ ನಿರ್ವಹಣೆ, ವಾರ್ಷಿಕ ಲೆಕ್ಕ ಪರಿಶೋಧನೆ, ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ, ತೆರಿಗೆ ವಸೂಲಿ, ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿಗಳ ರಚನೆಯಂತಹ ಆಂಶಗಳನ್ನು ಪರಿಶೀಲಿಸಲಾಗುತ್ತದೆ.
ಇ–ಆಡಳಿತ ವ್ಯವಸ್ಥೆಯ ಅಳವಡಿಕೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರ ಕಲ್ಯಾಣಕ್ಕೆ ಮೀಸಲಾದ ವಿಶೇಷ ಅನುದಾನದ ಸದ್ಬಳಕೆ, ಸಕಾಲ ಸೇವೆ, ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು, ಸರ್ಕಾರಿ ಆಸ್ತಿಗಳ ರಕ್ಷಣೆ, ಕೆರೆ ಮತ್ತು ಕಲ್ಯಾಣಿಗಳ ಸಮರ್ಪಕ ನಿರ್ವಹಣೆ ಸಹ ಪುರಸ್ಕಾರಕ್ಕೆ ಪ್ರಮುಖ ಅರ್ಹತೆಗಳು.
ಈ ಎಲ್ಲ ಅಂಶಗಳಿಗೆ ಪ್ರತ್ಯೇಕ ಅಂಕ ನಿಗದಿಪಡಿಸಿ, ಗ್ರಾಮ ಪಂಚಾಯಿತಿಗಳು ಇ–ಆಡಳಿತ ವ್ಯವಸ್ಥೆಯಲ್ಲಿ ದಾಖಲಿಸಿರುವ ಮಾಹಿತಿ ಮತ್ತು ಸಲ್ಲಿಸಿದ ದಾಖಲೆ ಪತ್ರಗಳಗಳಲ್ಲಿನ ವಿವರವನ್ನು ಸಮಗ್ರವಾಗಿ ಪರಿಶೀಲಿಸಿ ಅಂಕ ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಚ್ಚು ಅಂಕ ಗಳಿಸಿದ ಪಂಚಾತಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಪುರಸ್ಕಾರವೂ ಗ್ರಾಮ ಪಂಚಾತಿಗಳಿಗೆ ಮತ್ತಷ್ಟು ಜನಪರ ಕಾರ್ಯ ಹಾಗೂ ಉತ್ತಮ ಆಡಳಿತ ನಿರ್ವಹಣೆಗೆ ಪ್ರೇರಣೆಯಾಗಲಿದೆ.
***
ಇತರೆ ಗ್ರಾ.ಪಂಗಳಿಗೆ ಸ್ಪೂರ್ತಿ
ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿರುವ ಗ್ರಾಮ ಪಂಚಾತಿಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವುದರಿಂದ ಪಂಚಾಯಿತಿಗಳ ನಡುವೆ ಪೈಪೋಟಿ ಹೆಚ್ಚುತ್ತದೆ. ಇದರಿಂದ ಪಂಚಾಯಿತಿಯಿಂದ ಅಭಿವೃದ್ಧಿಯ ಕಾರ್ಯಕ್ರಮಗಳ ಕಡೆ ಗಮನಹರಿಸಲು ಸಹಕಾರಿಯಾಗುತ್ತದೆ. ಅಧಿಕಾರಿಗಳ ಮತ್ತು ಚುನಾಯಿತ ಆಡಳಿತ ಮಂಡಳಿ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಈ ಗ್ರಾ.ಪಂಗಳು ಒಳ್ಳೆಯ ಕೆಲಸ ಮಾಡಿದಿರುವು ಬೇರೆ ಪಂಚಾಯಿತಿಗಳು ಉತ್ತಮ ಕೆಲಸ ಮಾಡಲು ಸ್ಪೂರ್ತಿಸಿ ಸಿಕ್ಕದಂತಾಗಿದೆ.
– ಎಚ್.ವಿ.ದರ್ಶನ್, ಜಿ.ಪಂ ಸಿಇಒ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.