ಕೋಲಾರ: ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಧನುರ್ವಾಯು, ಡಿಫ್ತಿರಿಯಾ ಮತ್ತು ಗಂಟಲಮಾರಿ ರೋಗ ನಿರೋಧಕ ಚುಚ್ಚುಮದ್ದು ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
‘ಎಲ್ಲಾ ಶಾಲೆಗಳ 1ನೇ, 5ನೇ ತರಗತಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಲಾಗುತ್ತಿದೆ. ರೋಗಗಳ ಬಗ್ಗೆ ಮಕ್ಕಳ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ವಾಣಿ ತಿಳಿಸಿದರು.
‘ಜ್ವರ ಬಂದಾಗ ಮೊದಲು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಜ್ವರ ನಿರ್ಲಕ್ಷಿಸಿ ಮನೆಯಲ್ಲೇ ಸ್ವಯಂ ಚಿಕಿತ್ಸೆ ಪಡೆಯುವುದು ಸರಿಯಲ್ಲ. ಇತ್ತೀಚೆಗೆ ಜ್ವರ ಕಾಣಿಸಿಕೊಂಡು ಉಲ್ಬಣವಾದಾಗ ಧನುರ್ವಾಯು, ಡಿಫ್ತಿರಿಯಾ ಕಾಯಿಲೆ ಎಂದು ಪತ್ತೆಯಾಗಿ ಚಿಕಿತ್ಸೆ ನೀಡಿದ ನಿದರ್ಶನಗಳಿವೆ. ಜ್ವರ, ಶಕ್ತಿಹೀನತೆ, ದೇಹ ಬಾಗಿದಂತಾಗುವುದು, ಗಾಯ ವಾಸಿಯಾಗದಿರುವುದು ಈ ಕಾಯಿಲೆಯ ಲಕ್ಷಣಗಳು’ ಎಂದು ಹೇಳಿದರು.
‘ಗಂಟಲ ಮಾರಿಯಲ್ಲೂ ಜ್ವರದ ಲಕ್ಷಣ ಕಾಣಿಸಿಕೊಳ್ಳುತ್ತದೆ. ಜತೆಗೆ ಎಂಜಲು ನುಂಗಲು ಕಷ್ಟವಾಗುವುದು, ಗಂಟಲ ಊತ, ಉಸಿರಾಟ ಸಮಸ್ಯೆ ಎದುರಾಗುತ್ತದೆ. ಕಾಯಿಲೆ ನಿರ್ಲಕ್ಷಿಸಿದರೆ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ’ ಎಂದು ಎಚ್ಚರಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ಕುಮಾರ್, ಶಿಕ್ಷಕರಾದ ಎಸ್.ಅನಂತ ಪದ್ಮನಾಭ್, ಶ್ವೇತಾ, ಫರೀದಾ, ಸಚ್ಚಿದಾನಂದಮೂರ್ತಿ, ಸತೀಶ್ ಎಸ್.ನ್ಯಾಮತಿ, ಭವಾನಿ, ಶ್ರೀನಿವಾಸಲು, ವಸಂತಮ್ಮ, ಡಿ.ಚಂದ್ರಶೇಖರ್ ಹಾಜರಿದ್ದರು.