ಟೇಕಲ್: ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡರೆ ಗ್ರಾಮಗಳಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಯೋಜನಾ ನಿರ್ದೇಶಕಿ ಡಿ.ಸಿ. ಶ್ರುತಿ ಹೇಳಿದರು.
ಹೋಬಳಿಯ ಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ದುಡಿಯೋಣ ಬಾ ಅಭಿಯಾನದ ಆಟೊ ಪ್ರಚಾರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ನರೇಗಾ ಕೂಲಿಯನ್ನು ₹ 309ಕ್ಕೆ ಏರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗ ನೀಡುವುದರಲ್ಲಿ ನರೇಗಾ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಬೇಸಿಗೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಸರ್ಕಾರ ದುಡಿಯೋಣ ಅಭಿಯಾನ ಆರಂಭಿಸಿದೆ. ಕೂಲಿ ಕಾರ್ಮಿಕರಿಗೆ ಹೊಸ ಜಾಬ್ ಕಾರ್ಡ್ ವಿತರಣೆ ಹಾಗೂ ಉದ್ಯೋಗ ನೀಡಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ನರೇಗಾದಡಿ ಬನಹಳ್ಳಿ ಹಾಗೂ ನೂಟವೆ ಗ್ರಾಮ ಪಂಚಾಯಿತಿಯಲ್ಲಿ ಕೈಗೊಳ್ಳಲಾದ ಅಂಗನವಾಡಿಗಳು, ಶೌಚಾಲಯ, ಗ್ರಾಮೀಣ ಉದ್ಯಾನ, ಶಾಲೆ ಸಂಬಂಧಿಸಿದ ಕಾಮಗಾರಿಗಳನ್ನು ಪರಿಶೀಲಿಸಿದರು.
ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವಿ. ಕೃಷ್ಣಪ್ಪ, ಸಹಾಯಕ ನಿರ್ದೇಶಕ ರಾಘವೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಐಇಸಿ ಸಂಯೋಜಕ ಆನಂದ್ ಸಿ. ಹಾಜರಿದ್ದರು.