ಕೆಜಿಎಫ್: ಎನ್.ಜಿ.ಹುಲ್ಕೂರು ಗ್ರಾಮ ಪಂಚಾಯಿತಿಯ ಮಜರಾ ಕೊತ್ತೂರು ಗ್ರಾಮದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಮಾಸ್ತಿಯ ಯುವಕ ತಂಡ ಪ್ರಥಮ ಸ್ಥಾನ ಪಡೆಯಿತು.
ತಂಡವು ಗಂಗಮ್ಮ ದೇವಿ ಯುವಕ ತಂಡವನ್ನು ಮಣಿಸಿ, ₹ 25 ಸಾವಿರ ಮೊದಲ ಬಹುಮಾನ ಪಡೆಯಿತು.
ಪ್ರಶಸ್ತಿ ವಿತರಿಸಿ ಮಾತನಾಡಿದ ಮುಖಂಡ ಅ.ಮು.ಲಕ್ಷ್ಮೀನಾರಾಯಣ, ‘ಯುವಕರು ದೇಸಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕ್ರೀಡೆಗಳಲ್ಲಿ ಭಾಗವಹಿಸಿ ಹೆಸರು ಮತ್ತು ಹಣ ಎರಡನ್ನೂ ಸಂಪಾದಿಸಲು ಸಾಕಷ್ಟು ದಾರಿಗಳಿವೆ’ ಎಂದರು.
ಮುಖಂಡ ಎನ್.ಆರ್.ವಿಜಯಶಂಕರ್ ಮಾತನಾಡಿ, ‘ಯುವಕರು ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಿಂದ ವಿವಿಧ ರೀತಿಯಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಮುಕ್ತರಾಗಲು ಕ್ರೀಡಾ ಚಟುವಟಿಕೆ ಸಹಕಾರಿ’ ಎಂದು ಹೇಳಿದರು.
20 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಮಲ್ಲನಾಯಕನಹಳ್ಳಿಯ ತಂಡವು ಮೂರನೇ ಮತ್ತು ಮುಳಬಾಗಿಲು ತಂಡವು ನಾಲ್ಕನೇ, ಜೆ.ಕೆ.ಪುರ ತಂಡವು ಐದನೇ ಸ್ಥಾನ ಪಡೆಯಿತು.