ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಹೂವುಗಳ ಅಂದಕ್ಕೆ ಮನಸೋತರು...

Published 27 ಜನವರಿ 2024, 5:52 IST
Last Updated 27 ಜನವರಿ 2024, 5:52 IST
ಅಕ್ಷರ ಗಾತ್ರ

ಕೋಲಾರ: ಅರ್ಜುನ ಅನೆಯ ಮರಳಿನ ಕಲಾಕೃತಿ, ವೈವಿದ್ಯಮಯ ಹೂವುಗಳ ಕಲರವ, ರಾಮಮಂದಿರ, ಡೈನಾಸೋರ್‌ ಸೇರಿದಂತೆ ವಿವಿಧ ಕಲಾಕೃತಿಗಳು, ತರಕಾರಿಗಳಿಂದ ಅಲಂಕಾರ. ಎತ್ತ ನೋಡಿದರೂ ಹೂವು. ಜೊತೆಗೆ ಸಿರಿಧಾನ್ಯ ತಿನಿಸು…

ಜಿಲ್ಲಾ ನ್ಯಾಯಾಲಯ ಬಳಿಯ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ನರ್ಸರಿಯಲ್ಲಿ ಆಯೋಜಿಸಿರುವ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ, ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನದ ಝಲಕ್‌ ಇದು.

ಗಣರಾಜ್ಯೋತ್ಸವ ಪ್ರಯುಕ್ತ ಮೂರು ದಿನ ಆಯೋಜಿಸಿರುವ ಪ್ರದರ್ಶನಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಚಾಲನೆ ನೀಡಿದರು.

ಮೊದಲನೇ ದಿನವೇ ಜನರು ಹೂವುಗಳ ಅಂದಕ್ಕೆ ಮನಸೋತರು. ಹೂವುಗಳು, ಕಲಾಕೃತಿ ಮುಂದೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಮೇಳ ಭಾನುವಾರದವರೆಗೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಸಚಿವರು ಆತ್ಮ ಯೋಜನೆಯಡಿ ಜಿಲ್ಲಾಮಟ್ಟದ ಹಾಗೂ ತಾಲ್ಲೂಕುಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಿದರು.

‘ಕೃಷಿ ಆಧಾರಿತ ಕುಟುಂಬಗಳು ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಪೂರಕವಾದ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದ್ದು, ಅದನ್ನು ರೈತರಿಗೆ ತಲುಪಿಸಬೇಕು’ ಎಂದು ಅವರು ಹೇಳಿದರು.

‘ಬದಲಾದ ಜೀವನ ಶೈಲಿಯಿಂದ ಮನುಷ್ಯನ ಆಹಾರ ಪದ್ಧತಿಯು ಬದಲಾಗಿದೆ. ಸಿರಿಧಾನ್ಯಗಳನ್ನು ಸೇವಿಸುವ ಪರಿಸ್ಥಿತಿ ಎದುರಾಗಿದೆ’ ಎಂದರು.

ಶಾಸಕ ಕೊತ್ತೂರು ಜಿ.ಮಂಜುನಾಥ್‌ ಮಾತನಾಡಿ, ‘ಕೋಕಾಕೋಲಾ ತ್ಯಜಿಸಿ ಎಳನೀರು ಸೇವಿಸಿ, ಫಿಜ್ಜಾ, ಬರ್ಗರ್‌ ತ್ಯಜಿಸಿ ಮುದ್ದೆ ತಿನ್ನಿ’ ಎಂದು ಸಲಹೆ ನೀಡಿದರು.

ಹೂವುಗಳಿಂದ ಡೈನೋಸರ್‌, ಹೂವಿನ ಮನೆ, ಸೆಲ್ಫಿ ಪಾಯಿಂಟ್‌ ರಚಿಸಲಾಗಿದೆ. ಹಣ್ಣು, ತರಕಾರಿಗಳಲ್ಲೂ ವಿವಿಧ ಕಲಾಕೃತಿಗಳು ಮೂಡಿಬಂದಿವೆ. ಒಳಾಂಗಣ ಅಲಂಕಾರಿಕ ಗಿಡ, ಟೆರಕೋಟ ಕುಂಡಗಳನ್ನು ‌ಪ್ರದರ್ಶಿಸಲಾಗುತ್ತಿದೆ.

‘ನಿತ್ಯ ರಾತ್ರಿ ಎಂಟು ಗಂಟೆವರೆಗೆ ಪ್ರದರ್ಶನ ಇರಲಿದೆ. ಜೊತೆಗೆ ವಿದ್ಯುತ್‌ ಅಲಂಕಾರ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೂವುಗಳ ಅಂದ ಸವಿಯಬಹುದು’ ಎಂದು ಕೃಷಿ ಜಂಟಿ ನಿರ್ದೇಶಕಿ ಸುಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ತಿಳಿಸಿದರು.

ಜಿಲ್ಲೆಯ ರೈತರು ಬೆಳೆದ ವಿವಿಧ ಬಗೆಯ ಹಣ್ಣು, ಹೂವು, ತರಕಾರಿಗಳ ಪ್ರದರ್ಶನವಿರಲಿದೆ. ಸಿರಿಧಾನ್ಯ ಖಾದ್ಯಗಳಿಗೆ ಸಂಬಂಧಿಸಿದ ಆಹಾರ ಮಳಿಗೆ ಸ್ಥಾಪಿಸಲಾಗಿದೆ.

ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ್‌ ವಾಣಿಕ್ಯಳ್‌, ಕೃಷಿಇಲಾಖೆ ಜಂಟಿ ನಿರ್ದೇಶಕಿ ಸುಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ತಹಶೀಲ್ದಾರ್‌ ಹರ್ಷವರ್ಧನ್‌ ಇದ್ದರು.

ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ

ಜಿಲ್ಲಾಮಟ್ಟದ ಪ್ರಶಸ್ತಿ ವಿಜೇತರು: ವೆಂಕಟರಾಮಪ್ಪ (ತಿಪ್ಪಸಂದ್ರ), ಬಿ.ಎಂ.ರಾಮಪ್ಪ (ತೊಂಡಾಲ), ಪದ್ಮಾವತಮ್ಮ (ಮಾವಹಳ್ಳಿ), ಅನಸೂಯಮ್ಮ (ಮೋತಕಪಲ್ಲಿ), ಮಂಜುನಾಥರೆಡ್ಡಿ (ಕೆ.ಪಾತೂರು), ಕೋದಂಡಪ್ಪ (ತೊಂಡಹಳ್ಳಿ), ಡಿ.ಎನ್‌.ಮುನಿರಾಜು (ದೊಡ್ಡಸಬ್ಬೇನಹಳ್ಳಿ), ಶ್ರೀರಾಮರೆಡ್ಡಿ (ಆರ್‌.ತಿಮ್ಮಸಂದ್ರ), ಶ್ರೀನಿವಾಸ್‌ ಕೆ.ವಿ (ಕುಪ್ಪೂರು), ಎಸ್‌.ರಮೇಶ್‌ ಕುಮಾರ್‌ (ವಳಗೇರನಹಳ್ಳಿ).

ತಾಲ್ಲೂಕುಮಟ್ಟ: ವಿ.ಮುರಳೀಧರ್‌ (ಸುಗಟೂರು), ಗಜೇಂದ್ರ ಎಂ.ಎಸ್‌ (ವಕ್ಕಲೇರಿ), ಮುರಳಿ ಎಸ್‌ (ಸುಗಟೂರು), ಸುಭಾಷ್‌ (ವಾನರಾಶಿ), ವೆಂಕಟೇಶಪ್ಪ ಎನ್‌ (ಜಡೇರಿ), ಎಸ್‌.ಎನ್‌.ವೆಂಕಟೇಶ್‌ (ಶಿವಾರಪಟ್ಟಣ), ಚಂದ್ರಿಕಾ (ಅಗ್ರಹಾರ ಹೊಸಹಳ್ಳಿ), ವೆಂಕಟೇಶಪ್ಪ (ಬನಹಳ್ಳಿ), ನಾರಾಯಣಸ್ವಾಮಿ (ಮಿಟ್ಟಗಾನಹಳ್ಳಿ), ಬೈರಪ್ಪ (ಚನ್ನಕಲ್‌), ಮುನಿವೆಂಕಟಸ್ವಾಮಿ (ಬೈರನಾಯಕನಹಳ್ಳಿ), ವೆಂಕಟಸ್ವಾಮಿ (ದೊಡ್ಡೂರು), ಆನಂದರೆಡ್ಡಿ (ಚಕ್ಕರನಹಳ್ಳಿ), ಲಕ್ಷ್ಮಮ್ಮ (ತಾತೇಪಲ್ಲಿ), ಆರ್‌.ವಿ.ರಾಮಕೃಷ್ಣಪ್ರಸಾದ್‌ (ಸಂಗನಹಳ್ಳಿ), ಟಿ.ಶಾಂತಮ್ಮ (ಗೊಟ್ಟಿಕುಂಟೆ), ದಾಸಪ್ಪ (ಹಿರಣ್ಯಗೌಡನಹಳ್ಳಿ), ಜಗದೀಶ್‌ (ಆಚಂಪಲ್ಲಿ), ರಘುಪತಿ (ಭಟ್ರಹಳ್ಳಿ), ಆರ್‌.ವಿಶ್ವನಾಥ್‌ (ಮನ್ನೇನಹಳ್ಳಿ), ಬಿ.ವಿ.ನಾರಾಯಣಪ್ಪ (ಕೊಳತೂರು), ಎಂ.ಎಸ್‌.ವರಲಕ್ಷ್ಮಿ (ಮುಂಚೀನೀಳ್ಳಕೋಟೆ), ವಜನಾ (ಆಲವಟ್ಟಿ), ಕೆ.ಎಂ.ಹುಲ್ಲಾಚೇಗೌಡ (ಕುಪ್ಪಹಳ್ಳಿ), ಮಂಜುನಾಥ್‌ (ಪಾಳ್ಯ).

ಅರ್ಜುನ ಆನೆ ಕಲಾಕೃತಿ ಮೋಡಿ

ಮರಳಿನಿಂದ ರಚಿಸಲಾಗಿರುವ ಅರ್ಜುನ ಆನೆ ಕಲಾಕೃತಿ ಜನರ ಮನಸೂರೆಗೊಂಡಿತು. ಹೆಚ್ಚಿನವರು ಸೆಲ್ಫಿ, ಫೋಟೊ ತೆಗೆದುಕೊಂಡು ಸಂಭ್ರಮಿಸಿದರು.

ಮೈಸೂರಿನ ಗೌರಿ ಎಂಬುವರು ಈ ಕಲಾಕೃತಿ ಸಿದ್ಧಪಡಿಸಿದ್ದಾರೆ. ಮೈಸೂರು ದಸರೆಯಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಈಚೆಗೆ ಹಾಸನ ಜಿಲ್ಲೆಯಲ್ಲಿ ಮೃತಪಟ್ಟಿತ್ತು. ಅದಕ್ಕೆ ಗೌರವ ಸೂಚಿಸಲು ಕಲಾಕೃತಿ ರಚಿಸಲಾಗಿದೆ.

ಹೂವಿನಿಂದ ರಚಿಸಲಾಗಿರುವ ಡೈನೋಸರ್‌ ಮುಂದೆ ಮಕ್ಕಳು
ಹೂವಿನಿಂದ ರಚಿಸಲಾಗಿರುವ ಡೈನೋಸರ್‌ ಮುಂದೆ ಮಕ್ಕಳು
ಹೂವಿನ ಅಲಂಕಾರ ವೀಕ್ಷಿಸಿದ ಗಣ್ಯರು
ಹೂವಿನ ಅಲಂಕಾರ ವೀಕ್ಷಿಸಿದ ಗಣ್ಯರು
ಹೂವು ತರಕಾರಿಯಿಂದ ರಚಿಸಲಾಗಿರುವ ಕಲಾಕೃತಿಗಳು
ಹೂವು ತರಕಾರಿಯಿಂದ ರಚಿಸಲಾಗಿರುವ ಕಲಾಕೃತಿಗಳು
ಹೂವಿನ ಕಲಾಕೃತಿ
ಹೂವಿನ ಕಲಾಕೃತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT