ಕೋಲಾರ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಈ ಬಾರಿ ಇಬ್ಬರೂ ಹೊಸ ಮುಖಗಳೇ. ಮೊದಲ ಬಾರಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ನ ಕೆ.ವಿ.ಗೌತಮ್ ಹಾಗೂ ಜೆಡಿಎಸ್ನ ಎಂ.ಮಲ್ಲೇಶ್ ಬಾಬು ನಡುವೆ ನೇರ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ.
ಎರಡೂ ಪಕ್ಷಗಳು ತಡವಾಗಿ ಟಿಕೆಟ್ ಘೋಷಿಸಿದ್ದು, ಕಾಂಗ್ರೆಸ್ನಲ್ಲಂತೂ ಅಭ್ಯರ್ಥಿ ವಿಚಾರವಾಗಿ ರಾದ್ಧಾಂತವೇ ನಡೆದಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸತತ ಎಂಟು ಬಾರಿ ಕೆ.ಎಚ್.ಮುನಿಯಪ್ಪ ಸ್ಪರ್ಧಿಸಿ ಏಳು ಬಾರಿ ಗೆದ್ದಿದ್ದಾರೆ. ಅವರು 2019ರ ಚುನಾವಣೆಯಲ್ಲಿ ಬಿಜೆಪಿಯ ಎಸ್.ಮುನಿಸ್ವಾಮಿ ವಿರುದ್ಧ ಪರಾಭವಗೊಂಡಿದ್ದರು. ಆ ಮೂಲಕ ಬಿಜೆಪಿ ಈ ಕ್ಷೇತ್ರದಲ್ಲಿ ಮೊದಲ ಬಾರಿ ಖಾತೆ ತೆರೆದಿತ್ತು. ಈ ಬಾರಿ ಮೈತ್ರಿಧರ್ಮ ಪಾಲನೆಗಾಗಿ ಬಿಜೆಪಿ ಈ ಕ್ಷೇತ್ರ ತ್ಯಾಗ ಮಾಡಿದ್ದು ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿ ಕಣಕ್ಕಿಳಿಸಿದೆ.
ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಗೌತಮ್ ಹೊರಗಿನವರು ಎಂಬ ಅಸ್ತ್ರ ಪ್ರಯೋಗಿಸಲು ಜೆಡಿಎಸ್ ಈಗಲೇ ಸಜ್ಜಾದಂತಿದೆ. ‘ಸ್ಥಳೀಯರು ವರ್ಸಸ್ ಹೊರಗಿನವರು’ ಎಂಬ ಅಭಿಯಾನವನ್ನೇ ಆರಂಭಿಸಿದೆ. ಭೋವಿ ಸಮುದಾಯದ ಮಲ್ಲೇಶ್ ಬಾಬು ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ.
ಬಣ ಜಗಳ ಇರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಮುಂದೆ ದೊಡ್ಡ ಸವಾಲು ಇದೆ. ಆದರೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೇಲೆ ನಂಬಿಕೆ ಇಟ್ಟುಕೊಂಡಿದೆ. ಇನ್ನು ಜೆಡಿಎಸ್ ಕಳೆದ ಬಾರಿ ಗೆದ್ದಿದ್ದ ಬಿಜೆಪಿ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಮೋದಿ ನಾಮ ಜಪಿಸುತ್ತಿದೆ. ಆದರೆ, ಮೈತ್ರಿ ಪಕ್ಷಗಳ ಕಾರ್ಯಕರ್ತರ ನಡುವೆ ಹೊಂದಾಣಿಕೆ ಆಗಲಿದೆಯೇ ಎಂಬ ಪ್ರಶ್ನೆಯೂ ಕ್ಷೇತ್ರದಲ್ಲಿದೆ.
ಅಭ್ಯರ್ಥಿಗಳು
ಕೆ.ವಿ.ಗೌತಮ್, ಕಾಂಗ್ರೆಸ್
ಎಂ.ಮಲ್ಲೇಶ್ ಬಾಬು, ಜೆಡಿಎಸ್
ವಿಧಾನಸಭೆ ಕ್ಷೇತ್ರಗಳ ಪಕ್ಷವಾರು ಪ್ರಾತಿನಿಧ್ಯ
ಕಾಂಗ್ರೆಸ್ 5
ಜೆಡಿಎಸ್ 3
ಬಿಜೆಪಿ: 0
ಮತದಾರರ ಸಂಖ್ಯೆ
ಪುರುಷರು; 8,45,636
ಮಹಿಳೆಯರು; 8,62,716
ಲಿಂಗತ್ವ ಅಲ್ಪಸಂಖ್ಯಾತರು; 213
ಒಟ್ಟು; 17,08,565
2019; ಹೆಸರು; ಪಕ್ಷ; ಪಡೆದ ಮತಗಳು
ಗೆದ್ದವರು; ಎಸ್.ಮುನಿಸ್ವಾಮಿ; ಬಿಜೆಪಿ; 7,09,165
ಸಮೀಪದ ಪ್ರತಿಸ್ಪರ್ಧಿ; ಕೆ.ಎಚ್.ಮುನಿಯಪ್ಪ; ಕಾಂಗ್ರೆಸ್; 4,99,144