ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ರಂಗೇರಿದ ಚುನಾವಣಾ ಕಣ; ಕ್ಷಣ ಕ್ಷಣವು ರೋಚಕ

ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷಗಾದಿ ಚುನಾವಣೆಗೆ ಮೂಹರ್ತ ನಿಗದಿ
Last Updated 30 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕೋಲಾರ: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ ಚುನಾವಣೆಗೆ ಮೂಹರ್ತ ನಿಗದಿಯಾಗಿದ್ದು, ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಜಿಲ್ಲಾ ಕೇಂದ್ರದ ಕೋಲಾರ ನಗರಸಭೆಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಕ್ಷೇತರ ಸದಸ್ಯರ ಓಲೈಕೆ ಕಸರತ್ತು ಜೋರಾಗಿದೆ. ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿರುವ ಕಾಂಗ್ರೆಸ್‌ ಪಾಳಯವು ಪಕ್ಷೇತರ ಸದಸ್ಯರನ್ನು ಸೆಳೆಯಲು ಮುಂದಾಗಿದೆ.

ಭಾನುವಾರ (ನ.1) ಚುನಾವಣೆ ನಡೆಯಲಿದ್ದು, ಅಧಿಕಾರ ಗದ್ದುಗೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ನಡೆದಿದೆ. ಅಧಿಕಾರಕ್ಕಾಗಿ ಉಭಯ ಪಕ್ಷಗಳು ತಂತ್ರ–ಪ್ರತಿತಂತ್ರ ರೂಪಿಸುತ್ತಿದ್ದು, ರೆಸಾರ್ಟ್‌ ರಾಜಕೀಯ ಶುರುವಾಗಿದೆ.

ನಗರಸಭೆಯ 35 ಮಂದಿ ಚುನಾಯಿತ ಸದಸ್ಯರು, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಒಟ್ಟಾರೆ 38 ಮಂದಿಗೆ ಮತದಾನದ ಹಕ್ಕಿದೆ. ಅಧಿಕಾರದ ಗದ್ದುಗೆ ಏರಲು 20 ಸದಸ್ಯರ ಬೆಂಬಲ ಬೇಕಿದೆ. ಕೈ ಪಾಳಯಕ್ಕೆ ಆಡಳಿತದ ಚುಕ್ಕಾಣಿ ಹಿಡಿಯಲು 8 ಸದಸ್ಯರ ಬೆಂಬಲ ಬೇಕಿದೆ.

ಪಕ್ಷಾಂತರ ಪರ್ವ: ಚುನಾವಣೆಗೆ ಕ್ಷಣಗಣನೆ ಆರಂಭವಾದಂತೆ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) ಸದಸ್ಯರ ಪಕ್ಷಾಂತರ ಪರ್ವ ಶುರುವಾಗಿದೆ.

ಜೆಡಿಎಸ್‌ ಪಾಳಯವು ಶಾಸಕ ಕೆ.ಶ್ರೀನಿವಾಸಗೌಡ ಮತ್ತು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಸೇರಿದಂತೆ ಒಟ್ಟಾರೆ 10 ಮತ ಹೊಂದಿದೆ. ನಗರಸಭೆಯ ಹಿಂದಿನ ಅವಧಿಯಲ್ಲಿ ಸಿಪಿಎಂ ಬೆಂಬಲದೊಂದಿಗೆ ಎರಡೂವರೆ ವರ್ಷ ಅಧಿಕಾರ ನಡೆಸಿದ್ದ ಜೆಡಿಎಸ್‌ ಪಕ್ಷವು ತೆರೆಮರೆಯಲ್ಲೇ ‘ಕೈ’ ಪಾಳಯದ 3 ಸದಸ್ಯರಿಗೆ ಗಾಳ ಹಾಕಿದೆ.

ಶಾಸಕ ಶ್ರೀನಿವಾಸಗೌಡರ ಮನವೊಲಿಕೆಗೆ ಮಣಿದಿರುವ ಕಾಂಗ್ರೆಸ್‌ನ 3 ಮತ್ತು ಎಸ್‌ಡಿಪಿಐನ 4 ಸದಸ್ಯರು ಜೆಡಿಎಸ್‌ ತೆಕ್ಕೆಗೆ ಜಾರಿದ್ದು, ಅಧಿಕಾರದ ಕನಸು ಕಾಣುತ್ತಿರುವ ‘ಕೈ’ ಪಾಳಯಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿದ್ದ ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್‌ನ ನಸೀರ್‌ ಅಹಮ್ಮದ್‌ ಬಣವು ಶ್ರೀನಿವಾಸಗೌಡರ ಅನಿರೀಕ್ಷಿತ ರಾಜಕೀಯ ನಡೆಯಿಂದ ಕಂಗಾಲಾಗಿದೆ.

‘ಕೈ’ಗೆ ಬಿಜೆಪಿ ಬಲ: ಶ್ರೀನಿವಾಸಗೌಡರ ದಾಳಕ್ಕೆ ಪ್ರತಿ ದಾಳ ಉರುಳಿಸಿರುವ ನಸೀರ್ ಅಹಮ್ಮದ್‌ ಮತ್ತು ಕಾಂಗ್ರೆಸ್‌ ಮುಖಂಡರು ರಾಜಕೀಯ ವಿರೋಧಿ ಬಿಜೆಪಿ ಜತೆ ‘ಕೈ’ ಕುಲುಕಲು ಮುಂದಾಗಿರುವ ಗುಸುಗುಸು ಕೇಳಿ ಬರುತ್ತಿದೆ. ಸಂಸದ ಎಸ್‌.ಮುನಿಸ್ವಾಮಿ ಅವರ ಮೂಲಕ ಬಿಜೆಪಿಯ 3 ಸದಸ್ಯರ ಬೆಂಬಲ ಪಡೆಯಲು ಕಾಂಗ್ರೆಸ್‌ ಮುಖಂಡರು ಸರ್ವ ಪ್ರಯತ್ನ ನಡೆಸಿದ್ದಾರೆ.

ಶತಾಯಗತಾಯ ಅಧಿಕಾರಕ್ಕೆ ಬರುವ ಹಟಕ್ಕೆ ಬಿದ್ದಿರುವ ಕಾಂಗ್ರೆಸ್‌ ತನ್ನ ಎಲ್ಲಾ ಸದಸ್ಯರಿಗೆ ವಿಪ್‌ ಜಾರಿ ಮಾಡಿದ್ದು, ಜೆಡಿಎಸ್‌ನತ್ತ ವಾಲಿರುವ ಸದಸ್ಯರಿಗೆ ಶಿಸ್ತುಕ್ರಮದ ಸಂದೇಶ ರವಾನಿಸಿದೆ. ಮತ್ತೊಂದೆಡೆ ಪಕ್ಷೇತರರು ಮತ್ತು ಎಸ್‌ಡಿಪಿಐ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಲು ರಣತಂತ್ರ ರೂಪಿಸಿದೆ.

ಜೆಡಿಎಸ್‌ನ ಕೆಲ ಸದಸ್ಯರು ಕಾಂಗ್ರೆಸ್‌ ಮುಖಂಡರ ಜತೆ ಸಂಪರ್ಕದಲ್ಲಿದ್ದು, ಚುನಾವಣಾ ಕಣ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಾಳಯಕ್ಕೆ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಉಭಯ ಪಕ್ಷಗಳು ಸದಸ್ಯರನ್ನು ಉಳಿಸಿಕೊಳ್ಳಲು ರೆಸಾರ್ಟ್‌ ರಾಜಕೀಯದ ಮೊರೆ ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT