ಕೋಲಾರ: ‘ಸಮಾಜದಲ್ಲಿ ಶೋಷಿತರನ್ನು ಕಡೆಗಣಿಸುವ ಶಕ್ತಿಗಳು ಈಗಲೂ ಇವೆ. ಸಾಮಾಜಿಕ ಪ್ರಜ್ಞೆಯಲ್ಲಿ ಎಲ್ಲಾ ಸಮುದಾಯಗಳು ಪರಸ್ಪರ ಒಂದೇ ಎಂಬ ಭಾವನೆಯಲ್ಲಿ ಬದುಕುವ ವಾತಾವರಣ ಸೃಷ್ಟಿಯಾಗಬೇಕು’ ಎಂದು ಕವಿ ಸುಬ್ಬು ಹೊಲೆಯಾರ್ ಹೇಳಿದರು.
ಇಲ್ಲಿ ಭಾನುವಾರ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮಾತನಾಡಿ, ‘ಯಾವ ಸಮುದಾಯ ನಮ್ಮನ್ನು ತಿರಸ್ಕಾರ ಮಾಡುತ್ತದೆಯೋ ಅದೇ ಸಮುದಾಯವು ಸಮಾಜದಲ್ಲಿ ತಲೆ ಎತ್ತಿ ಮೆರೆಸುವಂತಹ ಕವಿತೆ ಬರೆಯುವ ಶಕ್ತಿ ಕೊಡುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ನಮ್ಮ ಉಳುಕುಗಳನ್ನು ಬಗೆಹರಿಸಿಕೊಳ್ಳುವ ಜತೆಗೆ ಆತ್ಮವಿಮರ್ಶೆಯ ಮನಸ್ಥಿತಿಯೊಂದಿಗೆ ಸಮುದಾಯವನ್ನು ಮುಂದೆ ತರಬೇಕು. ಇದಕ್ಕೆ ಪೂರಕವಾದ ಚರ್ಚೆಗಳು ಸಾಹಿತ್ಯ ಸಮ್ಮೇಳನಗಳಲ್ಲಿ ನಡೆಯಬೇಕು’ ಎಂದು ಸಲಹೆ ನೀಡಿದರು.
ಕವಿಗಳಾದ ವಿ.ವೆಂಕಟಸ್ವಾಮಿ, ಆನಂದ್, ಶಿವಣ್ಣ, ವಿ.ನಾಗರಾಜ್, ಗುರುಮೂರ್ತಿ, ನಾಗರಾಜ ಎತ್ತೂರು, ಸತ್ಯಂ ಅವರು ಕಾವ್ಯ ವಾಚಿಸಿದರು.