ಕೋಲಾರ: ‘ಗ್ರಾಮಗಳಲ್ಲಿ ಅಭಿವೃದ್ಧಿಯಾಗಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ಮತ್ತಷ್ಟು ಅಭಿವೃದ್ಧಿಗೆ ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಿ’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮನವಿ ಮಾಡಿದರು.
ತಾಲ್ಲೂಕಿನ ಹುತ್ತೂರು ಹೋಬಳಿಯ ಹರಟಿ ಮತ್ತು ವಡಗೂರು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸಭೆ ಹಾಗೂ ಶಿಳ್ಳೆಂಗೆರೆ ಗ್ರಾಮದಲ್ಲಿ ₹ 40 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳು ಗ್ರಾಮ ಮಟ್ಟದಿಂದ ಅಭಿವೃದ್ಧಿಯಾಗಿವೆ. ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಶ್ರೀಮಂತರ ಜೊತೆಗೆಆ ಪಕ್ಷದ ನಾಯಕರು ಮಾತ್ರ ಅಭಿವೃದ್ಧಿಯಾಗಿದ್ದಾರೆ. ಇದೇ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳಿರುವ ವ್ಯತ್ಯಾಸ’ ಎಂದರು.
‘ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿನ ಮತ್ತು ಕಾಂಗ್ರೆಸ್ ಶಾಸಕರ ಸಾಧನೆಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಕೋರಿದರು.
‘ಸಾರ್ವಜನಿಕರು ಗ್ರಾಮದಲ್ಲಿನಸಮಸ್ಯೆಗಳುಹಾಗೂ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಸಲಹೆ, ಸೂಚನೆಗಳಿದ್ದಲ್ಲಿ ಮುಕ್ತವಾಗಿ ಕರೆ ಮಾಡಿ ನನ್ನೊಂದಿಗೆ ಮಾತನಾಡಬಹುದು. ಹುತ್ತೂರು ಹೋಬಳಿ ಅಭಿವೃದ್ಧಿಗೆ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೀಸಂದ್ರ ಗೋಪಾಲಗೌಡ, ಹರಟಿ ಪಂಚಾಯ್ತಿ ಅಧ್ಯಕ್ಷೆ ವಸಂತಮ್ಮ, ಮುಖಂಡರಾದ ರಾಜು ಶ್ರೀನಿವಾಸಪ್ಪ, ಸಿ.ಎಂ. ನಾರಾಯಣಸ್ವಾಮಿ, ಕೃಷ್ಣೇಗೌಡ, ಸಂತೋಷ್ ರೆಡ್ಡಿ ಹಾಜರಿದ್ದರು.