ಕೋಲಾರ: ಕ್ರೀಡಾ ಅಭಿವೃದ್ಧಿ ಅಕಾಡಮಿಯಿಂದ ಶನಿವಾರ ರಾತ್ರಿ ನಗರದಲ್ಲಿ ಸಂಕ್ರಾಂತಿ ಅಂಗವಾಗಿ ಆಯೋಜಿಸಿದ್ದ ಜನಪದ ಸಂಭ್ರಮದಲ್ಲಿ ಮೂಡಿ ಬಂದಿ ಜನಪದ ಗೀತೆ, ಹಾಸ್ಯ ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನು ರಂಜಿಸಿದರು.
ಮಲೆಮಹದೇಶ್ವರನ ಮೇಲೆ ರಚಿಸಿರುವ ಜಾನಪದ ಹಾಡಿನೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಮೈ ಕೊರೆಯುವ ಚಳಿಯಲ್ಲಿ ಕುಳಿತಿದ್ದವರನ್ನು ರೋಮಾಂಚನಗೊಳಿಸಿತು.
ಸ್ಥಳೀಯ ಜನಪದ ಪ್ರತಿಭೆ ಉಮಾ ಅವರನ್ನು ಕರೆಸಿ ಜಾನಪದದ ರಸದೌತಣ ನೀಡುವ ಮೂಲಕ ಸಾವಿರಾರು ಪ್ರೇಕ್ಷಕರ ಮನಗೆದ್ದಿತು. ಜನಪದ ಗಾಯಕ ಗುರುರಾಜ್ ಹೊಸಕೋಟೆ ಪ್ರಸಕ್ತ ರಾಜಕೀಯ ವ್ಯವಸ್ಥೆ ಕುರಿತ ಹಾಡಿಗೆ ಮನಸೋತ ಪ್ರೇಕ್ಷಕರು ಸಂಭ್ರಮಿಸಿದರು.
ಗಾಯಕಿ ಬಿ.ಕೆ.ಸುಮಿತ್ರಾ, ಚಂದ್ರಿಕಾ ಗುರುರಾಜ್, ಶಿವಮೊಗ್ಗದ ಕೆ.ಯುವರಾಜ್, ದೀಪಿಕಾ ಶ್ರೀಕಾಂತ್, ಅನಿತಾ ಕೆ.ಆರ್.ಪೇಟೆ, ಶಿಡ್ಲಘಟ್ಟದ ಮಹೇಶ್, ಶಿವು, ಕುಮಾರ್ ಮೇಲುಕೋಟೆ ತಮ್ಮದೇ ಶೈಲಿಯಲ್ಲಿ ಜನಪದ ಗೀತೆ ಹಾಡಿ ರಂಜಿಸಿದರು.
ಮಿಮಿಕ್ರಿ ಕಲಾವಿದ ಗೋಪಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ, ಪ್ರಧಾನಿ ಮೋದಿ, ನಿತ್ಯಾನಂದ ಸ್ವಾಮಿ, ವಾಟಾಳ್ನಾಗರಾಜ್, ಸಂಸದ ಮಲ್ಲಿಕಾರ್ಜುನಖರ್ಗೆ ಅವರ ಧ್ವನಿ ಅನುಕರಣೆ ಮಾಡಿದಾಗ ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದರು.
ಕಲಾವಿದ ಗೋ.ನಾ.ಸ್ವಾಮಿ ಮಾರ್ಗದರ್ಶನದಲ್ಲಿ ಮೂಡಿಬಂದ ಕಾರ್ಯಕ್ರಮಕ್ಕೆ ಮಂಡ್ಯದ ಅನುಷಾಗೌಡ ನಿರೂಪಣೆ ಮಾಡಿದರು.
ಮುಖಂಡರಾದ ವೆಂಕಟೇಶ್, ಶ್ರೀನಾಥ್, ಶ್ರೀನಿವಾಸ್, ನಾಗೇಶ್, ನಟರಾಜ್, ದೇವರಾಜ್, ಅರವಿಂದ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.