ಮಾಲೂರು: ತಾಲ್ಲೂಕು ಸೇರಿದಂತೆ ಪಟ್ಟಣದಾದ್ಯಂತ ಸಂಕ್ರಾತಿ ಹಬ್ಬದ ಪ್ರಯುಕ್ತ ನಾಗರಿಕರು ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳಾದ ಅವರೆ, ಕಬ್ಬು ಮತ್ತು ಎಳ್ಳು–ಬೆಲ್ಲ ಖರೀದಿಯಲ್ಲಿ ತೊಡಗಿದ್ದರು.
ಪೂಜಾ ಸಾಮಗ್ರಿ ಸೇರಿದಂತೆ ಪದಾರ್ಥಗಳ ಬೆಲೆ ಗಗನಕ್ಕೇರಿತ್ತು. ಇದನ್ನು ಲೆಕ್ಕಿಸದೆ ಗ್ರಾಹಕರು ಹಬ್ಬದ ಮುನ್ನಾ ದಿನವಾದ ಶನಿವಾರ ಖರೀದಿಯಲ್ಲಿ ಮುಳುಗಿದ್ದರು. ಪಟ್ಟಣದ ಮಹಾರಾಜ ವೃತ್ತ, ಮಾರಿಕಾಂಬ ವೃತ್ತದ ಬಳಿ ಹಬ್ಬದ ಆಚರಣೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಿದರು.
ಹೂವು ಬೆಲೆ ದುಬಾರಿಯಾಗಿತ್ತು. ಕನಕಾಂಬರ ಒಂದು ಕೆ.ಜಿಗೆ ₹ 1000, ಮಲ್ಲಿಗೆ ₹ 1,100, ಸೇವಂತಿಗೆ ₹160, ಗುಲಾಬಿ ₹ 200 ರಿಂದ ₹ 225, ಚೆಂಡು ಹೂ ₹ 40ರಿಂದ ₹ 50 ಬೆಲೆ ಇತ್ತು.
ಹೊಸಕೋಟೆ ತಾಲ್ಲೂಕಿನ ಕೊರಳೂರು ಮಲ್ಲಸಂದ್ರದ ಕಬ್ಬು ಪಟ್ಟಣದ ಮಾರುಕಟ್ಟೆಯಲ್ಲಿ ತುಂಬಿತ್ತು. ಜೋಡಿ ಕಬ್ಬಿನ ಜಲ್ಲೆಗೆ ₹ 80 ರಿಂದ ₹ 100, ಗೆಣಸು ಕೆ.ಜಿಗೆ ₹ 100, ಕಡಲೆಕಾಯಿ ₹ 120 ಬೆಲೆ ಇತ್ತು. ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರು ವಿಧಿ ಇಲ್ಲದೆ ಖರೀದಿಸಿದರು.