ಕೋಲಾರ: ‘ಬಯಲುಸೀಮೆ ಮಕ್ಕಳಿಗೆ ಶಿಕ್ಷಣವೇ ಆಸ್ತಿ’ ಎಂದು ಹೆಬ್ಬಾಳ ಶಾಸಕ ವೈ.ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಶಾರದಾಪೂಜೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾರ್ಥಿಗಳು ಸವಾಲುಗಳನ್ನು ಮೆಟ್ಟಿನಿಲ್ಲುವ ಶಕ್ತಿ ಬೆಳೆಸಿಕೊಂಡು ಬಲಿಷ್ಠ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಆತ್ಮವಿಶ್ವಾಸ ತುಂಬುವ ಮೂಲಕ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಶಿಕ್ಷಕರು ಬೆಳೆಸಬೇಕು’ ಎಂದರು.
‘ಯುವಕರು ಕೈಯೆತ್ತಿ ಕೂಗಿದರೆ ಇಡೀ ಪ್ರಪಂಚವೇ ನಡುಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಪುಷ್ಟಿ ನೀಡುವಂತಾಗಬೇಕು. ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ದೇಶದ ವಿದ್ಯಾರ್ಥಿಗಳ ಭವಿಷ್ಯವನ್ನು ಭಾರತದ ವಿದ್ಯಾರ್ಥಿಗಳು ಕಸಿದುಕೊಳ್ಳುತ್ತಿದ್ದಾರೆ ಎಂಬ ಆತಂಕ ಇದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಚೌಡ ರೆಡ್ಡಿ ಮಾತನಾಡಿ, ‘ಶಿಕ್ಷಣದಿಂದ ದೂರ ಉಳಿದರೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದಿದ್ದ ಸಹ್ಯಾದ್ರಿ ಕಾಲೇಜಿನ ಟಿ.ಚೇತನಾ, ಸುನೀಲ್.ವಿ.ಸಿ, ರಿಫರ್ ಉಸ್ಮಾ, ಆರ್.ಪಿ.ಮೋಹನ್ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ವಿ.ನಾರಾಯಣಸ್ವಾಮಿ, ಪ್ರಾಂಶುಪಾಲ ಜಿ.ವಿ.ಕೃಷ್ಣಪ್ಪ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಉದಯಕುಮಾರ್, ಉಪಾಧ್ಯಕ್ಷ ಮಾರುತಿ ಸಿಂಗ್ರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ್ ಕೆಂಪರಾಜ್, ಜಿಲ್ಲಾ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ವೇಮಗಲ್ ಕಾಲೇಜು ಪ್ರಾಂಶುಪಾಲ ಮುನಿಕೃಷ್ಣಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಚಂದ್ರಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೈಕಮಾಂಡ್ಗೆ ಸಾವಿರ ಕೋಟಿ: ತನಿಖೆಯಿಂದ ಸತ್ಯಾಂಶ ಹೊರಬರಲಿದೆ
ಕೋಲಾರ: ‘ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಹೈಕಮಾಂಡ್ಗೆ ಸಾವಿರ ಕೋಟಿ ಕಳಹಿಸಿರುವ ಬಗ್ಗೆ ಬಿ.ಎಸ್.ಯಡಿಯೂರಪ್ಪ ಮಾಡಿರುವ ಆರೋಪದ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸಿದರೆ ಸತ್ಯಾಂಶ ಹೊರ ಬರುತ್ತದೆ’ ಎಂದು ಹೆಬ್ಬಾಳ ಶಾಸಕ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಸಹ್ಯಾದ್ರಿ ಪಿಯು ಕಾಲೇಜಿನ ವತಿಯಿಂದ ಭಾನುವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ. ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರವನ್ನು ಮುಚ್ಚಿಹಾಕಲು ಹೈಕಮಾಂಡ್ಗೆ ಹಣ ನೀಡಿರುವುದು’ ಸತ್ಯ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರವನ್ನು ಪ್ರತಿ ಹಂತದಲ್ಲೂ ಸಮರ್ಥಿಸುತ್ತಿದೆ. ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೋಳಿ ಮನೆಯಲ್ಲಿ ₹ 162 ಕೋಟಿ, ಶಾಸಕ ಎಂಟಿಬಿ ನಾಗರಾಜ್ ಮನೆಯಲ್ಲಿ ₹ 1.30 ಕೋಟಿ ಸಂಪತ್ತು ಸಿಕ್ಕಿರುವುದು ಯಡಿಯೂರಪ್ಪ ಮಾಡುತ್ತಿರುವ ಆರೋಪಕ್ಕೆ ಸತ್ಯವೆಂಬಂತೆ ಕಾಣುತ್ತಿದೆ’ ಎಂದರು.
‘ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಲೋಕೋಪ ಯೋಗಿ ಇಲಾಖೆಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಹಣವನ್ನು ಲೂಟಿ ಮಾಡಲಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಬೆಲೆಕೊ ಡುತ್ತಿಲ್ಲ. ಇದಕ್ಕೆಲ್ಲಾ ಸರ್ಕಾರವೇ ಕಾರಣ. ಶೈಕ್ಷಣಿಕ ವರ್ಷ ಮೂಗಿಯು ತ್ತಿದ್ದರೂ ವಿದ್ಯಾರ್ಥಿ ವೇತನ ಪಾವತಿ ಸುವಲ್ಲಿ ಸರ್ಕಾರ ಮೀನ ಮೇಷ ಎಣಿಸುತ್ತಿದೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.